ಯುಪಿ ಸರ್ಕಾರದ ಬಗ್ಗೆ ಮೋದಿ ಶ್ಲಾಘನೆ; ಯೋಗಿ ವಿರುದ್ಧ ಭಿನ್ನಮತವೆದ್ದ ಹೊತ್ತಿನಲ್ಲಿ ಅಚ್ಚರಿಯ ಬೆಳವಣಿಗೆ

ವಾರಾಣಸಿ: ಕೋವಿಡ್ 2ನೇ ಅಲೆ ನಿರ್ವಹಣೆಯಲ್ಲಿ ಉತ್ತರ ಪ್ರದೇಶ ಸಾಧನೆ ಸಾಟಿಯಿಲ್ಲದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಕೋವಿಡ್ ಆತಂಕದ ಮಧ್ಯೆಯೂ ಕನ್ವರ್ ಯಾತ್ರೆಗೆ ನಿರ್ಧರಿಸಿದ್ದ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೊಟೀಸ್ ನೀಡಿದ್ದ ಮರುದಿನವೇ, ಪ್ರಧಾನಿ ಉತ್ತರ ಪ್ರದೇಶ ಸರ್ಕಾರವನ್ನು ಹಾಡಿಹೊಗಳಿದ್ದಾರೆ.
ಮುಂದಿನ ವರ್ಷ ಚುನಾವಣೆ ಇರುವ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರ ವಾರಾಣಸಿಗೆ ಭೆಟಿ ನೀಡಿರುವ ಪ್ರಧಾನಿ ಮೋದಿ, ತಮ್ಮ ಮತ್ತು ಯೋಗಿ ಆದಿತ್ಯನಾಥ್ ವಿರುದ್ಧ ಮೂಡಿದೆ ಎನ್ನಲಾದ ಭಿನ್ನಾಭಿಪ್ರಾಯದ ಬಗೆಗಿನ ವದಂತಿಗಳನ್ನು ಮಸುಕುಗೊಳಿಸುವ ಹಾಗೆ ಸರ್ಕಾರವನ್ನು ಹೊಗಳಿರುವುದು ಪ್ರಮುಖ ಬೆಳವಣಿಗೆಯಾಗಿದೆ.
ಕೋವಿಡ್ ವಿರುದ್ಧದ ಸರ್ಕಾರದ ಕ್ರಮಗಳು ದಕ್ಷವಾಗಿವೆ. ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯ ಕೋವಿಡ್ ಬಿಕ್ಕಟ್ಟನ್ನು ನಿರ್ವಹಿಸಿರುವ ರೀತಿ ಶ್ಲಾಘನೆಗೆ ಅರ್ಹ ಎಂದು ಮೋದಿ ಹೇಳಿದ್ದಾರೆ.
ವ್ಯಾಕ್ಸಿನೇಷನ್ನಲ್ಲಿಯೂ ಉತ್ತರ ಪ್ರದೇಶ ಸರ್ಕಾರ ಮುಂದಿರುವುದನ್ನು ಮೋದಿ ಉಲ್ಲೇಖಿಸಿದ್ದಾರೆ.
ಉತ್ತರ ಪ್ರದೇಶ ಬಿಜೆಪಿಯಲ್ಲಿ ಯೋಗಿ ಆದಿತ್ಯನಾಥ್ ವಿರುದ್ಧ ಪಕ್ಷದ ನಾಯಕರಲ್ಲೇ ಹಲವರು ಭಿನ್ನಮತ ಹೊಂದಿದ್ದು ದೆಹಲಿಯವರೆಗೂ ದೂರು ಕೊಂಡೊಯ್ದಿದ್ದ ಹೊತ್ತಲ್ಲಿಯೇ ಯೋಗಿ ಆದಿತ್ಯನಾಥ್ ಬಗೆಗಿನ ಮೋದಿ ಶ್ಲಾಘನೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುದಂತೂ ನಿಜ.
