ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಸರ್ಕಾರದ ಅಧಿಕೃತ ಆದೇಶ: ಸಿಎಂ ಸುಪರ್ದಿಯಲ್ಲಿ ಬೆಂಗಳೂರು

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ರಾಜ್ಯ ಸರ್ಕಾರ ಹೊಸದಾಗಿ ಅಧಿಕೃತ ಆದೇಶ ಹೊರಡಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರೇ ಕೋವಿಡ್ ಉಸ್ತುವಾರಿ ಸಚಿವರಾಗಿದ್ದು ತಕ್ಷಣದಿಂದ ಜಾರಿಗೆ ಬರುವಂತೆ ಈ ಆದೇಶ ಜಾರಿಗೆ ಬರಲಿದೆ. ಸಂಪುಟ ಪುನಾರಚನೆ ಬೆನ್ನಲ್ಲೇ ಸರ್ಕಾರದ ಈ ನಡೆ ಗಮನ ಸೆಳೆದಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಸಿಎಂ ಆದಮೇಲೆ ಹಂಗಾಮಿ ಉಸ್ತುವಾರಿ ಸಚಿವರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಹೊಸ ಪಟ್ಟಿಯ ಪ್ರಕಾರ ಶಾಸಕರ ನಡುವೆ ಮೇಲಾಟಕ್ಕೆ ಕಾರಣವಾಗಿದ್ದ ಬೆಂಗಳೂರು ನಗರ ಉಸ್ತುವಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಹಿರಿಯ ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ ನಡುವೆ ಬೆಂಗಳೂರು ಉಸ್ತುವಾರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿತು. ಕೆಲ ಶಾಸಕರು ಸಿಎಂ ಬಳಿಯೇ ಉಸ್ತುವಾರಿ ಇರಲಿ ಎಂದು ಹೇಳಿದ್ದರು.
ಮತ್ತೊಂದು ಬೆಳವಣಿಗೆಯಲ್ಲಿ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಶಿವಮೊಗ್ಗದಿಂದ ಚಿಕ್ಕಮಗಳೂರು, ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಉತ್ತರಕನ್ನಡ ಜಿಲ್ಲೆ, ಅರಬೈಲ್ ಶಿವರಾಮ್ ಅವರನ್ನು ಹಾವೇರಿ ಜಿಲ್ಲೆ, ಕೆ.ಗೋಪಾಲಯ್ಯ ಅವರಿಗೆ ಹಾಸನ ಜತೆ ಮಂಡ್ಯ, ಮಂಡ್ಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕೆ.ಸಿ.ನಾರಾಯಣ ಗೌಡರಿಗೆ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವರನ್ನಾಗಿಸಲಾಗಿದೆ. ಇದೇ ರೀತಿ ಧಾರವಾಡ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಂಕರ್ ಮುನೇನ ಕೊಪ್ಪ ಅವರಿಗೆ ಬೀದರ್ ಜತೆ ರಾಯಚೂರು ಉಸ್ತುವಾರಿ ಸಚಿವರನ್ನಾಗಿಸಲಾಗಿದೆ.
ಉಳಿದಂತೆ ಬೆಳಗಾವಿ ಉಸ್ತುವಾರಿಯನ್ನು ಹಿರಿಯ ಸಚಿವರಾದ ಗೋವಿಂದ ಕಾರಜೋಳ, ಚಿಕ್ಕಮಗಳೂರು ಉಸ್ತುವಾರಿಯನ್ನು ಕೆ.ಎಸ್.ಈಶ್ವರಪ್ಪ, ಬಳ್ಳಾರಿ ಉಸ್ತುವಾರಿಯನ್ನು ಬಿ.ಶ್ರೀರಾಮಲು, ಚಾಮರಾಜನಗರ ಉಸ್ತುವಾರಿಯನ್ನು ವಿ.ಸೋಮಣ್ಣ, ವಿಜಯಪುರ ಉಸ್ತುವಾರಿ ಉಮೇಶ್ ವಿ ಕತ್ತಿ ಅವರಿಗೆ ನೀಡಲಾಗಿದೆ.
ಎಸ್.ಅಂಗಾರ-ಉಡುಪಿ, ಆರಗ ಜ್ಞಾನೇಂದ್ರ-ತುಮಕೂರು, ಡಾ.ಸಿ.ಎನ್.ಅಶ್ವತ್ಥನಾರಾಯಣ-ರಾಮನಗರ, ಸಿ.ಸಿ.ಪಾಟೀಲ್-ಬಾಗಲಕೋಟೆ, ಆನಂದ ಸಿಂಗ್-ಕೊಪ್ಪಳ, ಕೋಟಾ ಶ್ರೀನಿವಾಸಪೂಜಾರಿ- ಉತ್ತರ ಕನ್ನಡ, ಪ್ರಭು ಚವ್ಹಾನ್- ಯಾದಗಿರಿ, ಮರುಗೇಶ್ ನಿರಾಣಿ-ಕಲಬುರಗಿ, ಅರಬೈಲ್ ಶಿವರಾಮ್ ಹೆಬ್ಬಾರ್ ಅವರಿಗೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸರ್ಕಾರ ನೇಮಿಸಿದೆ.
ಮೈಸೂರು ಉಸ್ತುವಾರಿಯಾಗಿ ಎಸ್.ಟಿ.ಸೋಮಶೇಖರ್ ಮುಂದುವರಿದಿದ್ದು, ಬಿ.ಸಿ.ಪಾಟೀಲ್ ಅವರಿಗೆ ಚಿತ್ರದುರ್ಗ ಮತ್ತು ಗದಗ, ಬಿ.ಎ.ಬಸವರಾಜ್ –ದಾವಣಗೆರೆ, ಡಾ.ಕೆ.ಸುಧಾಕರ್-ಬೆಂಗಳೂರು ಗ್ರಾಮಾಂತರ, ಕೆ.ಗೋಪಾಲಯ್ಯ ಅವರಿಗೆ ಹಾಸನ ಮತ್ತು ಮಂಡ್ಯ, ಶಶಿಕಲಾ ಜೊಲ್ಲೆ ಅವರಿಗೆ ವಿಜಯನಗರ ಉಸ್ತುವಾರಿ ವಹಿಸಲಾಗಿದೆ.
ಚಿಕ್ಕಬಳ್ಳಾಪುರ-ಎಂಟಿಬಿ ನಾಗರಾಜ್, ಕೆ.ಸಿ.ನಾರಾಯಣ ಗೌಡರಿಗೆ ಶಿವಮೊಗ್ಗ, ಬಿ.ಸಿ.ನಾಗೇಶ್-ಕೊಡಗು, ವಿ.ಸುನೀಲ್ ಕುಮಾರ್-ದಕ್ಷಿಣ ಕನ್ನಡ, ಹಾಲಪ್ಪ ಆಚಾರ್-ಧಾರವಾಡ, ಶಂಕರ್ ಮುನೇನ ಕೊಪ್ಪ- ಬೀದರ್ ಮತ್ತು ರಾಯಚೂರು ಹಾಗೂ ಮುನಿರತ್ನ ಅವರಿಗೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ.
