ಕಲಬುರ್ಗಿ KVKಗೆ ಒಲಿದ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿ

ಕಲಬುರ್ಗಿ: ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಕಲಬುರರ್ಗಿಯ ಕೃಷಿ ವಿಜ್ಞಾನ ಕೇಂದ್ರಕ್ಕೆ 2020ನೇ ಸಾಲಿನ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿ ಲಭಿಸಿದ್ದು, ಜಿಲ್ಲೆಗೆ ಮತ್ತೊಂದು ಗರಿಮೆ ಬಂದಂತಾಗಿದೆ.
ಕೃಷಿಯಲ್ಲಿ ತಂತ್ರಜ್ಞಾನಾಧಾರಿತ ಅಧಿಕ ಹಾಗೂ ಗುಣಮಟ್ಟದ ಇಳುವರಿ ಮತ್ತು ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಕೃಷಿ ವಿಜ್ಞಾನ ಕೇಂದ್ರಗಳಿಗೆ ಈ ಪ್ರತಿಷ್ಠತ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿ 8 ಲಕ್ಷ ರೂ ನಗದು ಮತ್ತು ಟ್ರೋಪಿ ಪ್ರಮಾಣ ಪತ್ರ ಹೊಂದಿದೆ. ಇದು ದೇಶದಲ್ಲಿರುವ ಒಟ್ಟು 722 ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರಗಳ ಪೈಕಿ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದು, ನಾಡಿಗೆ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೀರ್ತಿ ತಂದುಕೊಟ್ಟಿದೆ.
ಪ್ರಮುಖವಾಗಿ ತೊಗರಿ ಬೆಳೆಯಲ್ಲಿ ಕಂಡು ಬರುವ ನೆಟೆ ಮತ್ತು ಗೊಡ್ಡುರೋಗ ನಿರೋಧಕ ತಳಿಗಳನ್ನು ಅಧಿಕ ಕ್ಷೇತ್ರಗಳಿಗೆ ವಿಸ್ತರಿಸಿ ಪಲ್ಸಮ್ಯಾಜಿಕ್ ತಂತ್ರಜ್ಞಾನದ ಬಳಕೆ ಹಾಗೂ ಸಮಗ್ರ ಕೀಟ ಮತ್ತು ನಿರ್ವಾಹಣಾ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಂಡು, ಹೆಚ್ಚುವರಿ ಇಳುವರಿ ಪಡೆದು ಆರ್ಥಿಕ ಬಲಗೊಳ್ಳುವಲ್ಲಿ ಕೃಷಿ ಕೇಂದ್ರ ತೊಡಗಿಸಿಕೊಂಡಿತ್ತು. ಈ ಪ್ರಶಸ್ತಿ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಮುಡಿಗೆರಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ: ರಾಜು ತೆಗಳ್ಳಿ ಹಾಗೂ ತಂಡದ ಶ್ರಮ ಕಾರಣವಾಗಿದೆ.
ಅದೆ ರೀತಿಯಾಗಿ ಪ್ರಗತಿಪರ ಕೃಷಿಕ ಹಾಳ ಸುಲ್ತಾನಪುರ ಗ್ರಾಮದ ಶರಣಬಸಪ್ಪ ಪಾಟೀಲ ಅವರಿಗೆ ರಾಷ್ಟ್ರಮಟ್ಟದ ಐಸಿಎಆರ್ “ಜಗಜೀವನ್ ರಾಮ್ ಅವಿಷ್ಕಾರ ಕೃಷಿಕ ಪುರಸ್ಕಾರ ಪ್ರಶಸ್ತಿ-2020’’ ಲಭಿಸಿದೆ. ಈ ಭಾಗದ ನೀರಿನ ಸದ್ಬಳಕೆ ಮಾಡುವುದು, ಸೌರಶಕ್ತಿ ವಿದ್ಯುತ್ ದೀಪ ಹಾಗು ಇನ್ನಿತರೆ ಕೃಷಿ ಚಟುವಟಿಕೆಗಳಿಗೆ ಬೇಕಾದ ಉಪಯುಕ್ತ ಆವಿಷ್ಕಾರಕ್ಕಾಗಿ ಪ್ರಶಸ್ತಿ ಲಭಿಸಿದೆ. ಇದರೊಂದಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗುವ ಮೂಲಕ ಕಲಬುರ್ಗಿ ಜಿಲ್ಲೆಗೆ ಮತ್ತೊಂದು ಗರಿಮೆ ಸಿಕ್ಕಂತಾಗಿದೆ.
