ವಿಜಯೇಂದ್ರ ಅವರಿಗೆ ನಾಯಕನಾಗುವ ನೈತಿಕತೆ ಇದೆಯೇ ?- ಯತ್ನಾಳ್ ಕಿಡಿ

ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಲಿಂಗಾಯತ ಸಮುದಾಯದ ನಾಯಕ ಆಗುವ ನೈತಿಕತೆ ಇದೆಯೇ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.
ಅಖಿಲ ಭಾರತ ಪಂಚಮಸಾಲಿ, ಗೌಡ-ಮಲೇಗೌಡ-ದೀಕ್ಷಾ ಲಿಂಗಾಯತ ಮೀಸಲಾತಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಈಗ ತುಮಕೂರು ಸಿದ್ಧಗಂಗಾ ಮಠದ ಮೂಲಕ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ಸಚಿವರಾದ ಸೋಮಣ್ಣ ಕಳೆದ 40 ವರ್ಷಗಳಿಂದ ಸಿದ್ಧಗಂಗಾ ಮಠಕ್ಕಾಗಿ ದುಡಿದಿದ್ದಾರೆ. ಆದ್ರೆ ಈಗ ಮಠದ ಕಾರ್ಯಕ್ರಮದಲ್ಲಿ ಸೋಮಣ್ಣ ಅವರೇ ಕಾಣಿಸುತ್ತಿಲ್ಲ. ಸದ್ಯ ವಿಜಯೇಂದ್ರ ತುಮಕೂರು ಮಠದ ಬಳಿಕ ಸುತ್ತೂರು ಮಠಕ್ಕೆ ತೆರಳುತ್ತಿದ್ದಾರೆ ಎಂದರು.
ವಿಜಯೇಂದ್ರ ಈಗ ಸಮುದಾಯದ ನಾಯಕರಾಗಲು ಹೊರಟಿದ್ದಾರೆ. ವಂಶಪಾರಂಪರ್ಯ ರಾಜಕಾರಣವನ್ನ ವಿಜಯೇಂದ್ರ ಮುಂದುವರೆಸುತ್ತಿದ್ದಾರೆ. ಮೊದಲು ನಾನು, ನಂತರ ನನ್ನ ಮಗ, ಆಮೇಲೆ ನನ್ನ ಮೊಮ್ಮಗ ಆದರೆ ಪಕ್ಷದಲ್ಲಿ ಈ ಪದ್ಧತಿ ಕಡಿಮೆಯಾಗುತ್ತಿದೆ ಎಂದರು.
ವಿಐಪಿ ಸ್ವಾಮೀಜಿಯೊಬ್ಬರು ತಮ್ಮ ಘನತೆಯನ್ನು ಮರೆತು ಒಬ್ಬರನ್ನು ಮುಖ್ಯಮಂತ್ರಿ ಮಾಡಲು ದೆಹಲಿಗೆ ಅಲೆದಾಡುತ್ತಿದ್ದಾರೆ. ಅವರಿಗೆ ಸಮುದಾಯದ ಬಗ್ಗೆ ಕಾಳಜಿ ಇಲ್ಲ ಎಂದು ಹೆಸರು ಹೇಳದೆಯೇ ವಚನಾನಂದ ಶ್ರೀಗಳ ವಿರುದ್ಧ ಕಿಡಿಕಾರಿದರು.
