ಹೆಣ್ಣುಮಕ್ಕಳ ರಕ್ಷಣೆಗೆ ಡಿಜಿಟಲೈಸ್ಡ್ ವ್ಯವಸ್ಥೆ ಜಾರಿ: ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ

ಕಾರವಾರ : ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಜಾರಿಗೊಳಿಸಿಲಾಗಿದೆ.ಆದರೆ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಉತ್ತರಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಕಷ್ಟವಾದರೂ ಕೂಡ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸುರಕ್ಷತೆ ಒದಗಿಸಲು ಕ್ರಮ ಕೈಗೊಳ್ಳಲಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಜಾರಿಗೊಳಿಸಲಾಗಿದೆ.ಎಲ್ಲೆಲ್ಲಿ ಹೆಣ್ಣುಮಕ್ಕಳು ನಿಂತುಕೊಳ್ಳುತ್ತಾರೆ. ಬಸ್ಗೆ ಕಾಯುತ್ತಿರುತ್ತಾರೆ ಎಂದು ತಿಳಿಯಲು ಡಿಜಿಟ್ ಲೈಸ್ಡ್ ವ್ಯವಸ್ಥೆ ಮಾಡಿದ್ದೇವೆ.
ಈ ವ್ಯವಸ್ಥೆಯನ್ನು ಬೆಂಗಳೂರು ಹಾಗೂ ತುಮಕೂರಿನಲ್ಲಿ ಸದ್ಯ ಅಳವಡಿಸಲಾಗಿದೆ. ಮೈಸೂರು,ತುಮಕೂರು ಘಟನೆ ನಡೆದ ಬಳಿಕ ಹೆಚ್ಚಿನ ಪೊಲೀಸ್ ಕಛೇರಿಗಳಲ್ಲಿ ಕ್ರಮಕ್ಕೆ ಆದೇಶ ಮಾಡಲಾಗಿದೆ.
ಹೆಣ್ಣುಮಕ್ಕಳು ಒಂಟಿಯಾಗಿ ಹೋಗಿ ಬರುವ ಪ್ರದೇಶಗಳಲ್ಲಿ ಸಿಸಿಕ್ಯಾಮೆರಾ, ಸೆಕ್ಯೂರಿಟಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಸಲು ಚರ್ಚೆ ಮಾಡಲಾಗುತ್ತಿದೆ. ಆದರೆ ಕೆಲವೊಂದು ಗ್ರಾಮಾಂತರ ಸೂಕ್ಷ್ಮ ಪ್ರದೇಶಗಳಲ್ಲಿ ಸುರಕ್ಷತೆ ಒದಗಿಸಲು ಕಷ್ಟವಾಗುತ್ತಿದೆ.ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸುರಕ್ಷತೆ ಒದಗಿಸುತ್ತದೆ ಎಂದರು.
ಉತ್ತರಕನ್ನಡ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅರಣ್ಯಭಾಗಗಳು ಹೆಚ್ಚಾಗಿದ್ದು,ಈ ಕಾರಣದಿಂದ ಅಲ್ಲಲ್ಲಿ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಹೆಣ್ಣುಮಕ್ಕಳು ಎಲ್ಲಿ ಹೋಗ್ತಾರೆ ಬರ್ತಾರೆ ಎಂದು ನೋಡಿಕೊಳ್ಳಬೇಕಾಗುತ್ತದೆ. ಒಳ ಪ್ರದೇಶಗಳಲ್ಲಿ ಯಾವಾಗ ಏನು ಆಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಸಚಿವರು ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಾದ ಕಾರವಾರದ ಹೊಟೇಗಾಳಿ, ಅಂಕೋಲಾ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
