ಜಗತ್ತಿನಲ್ಲಿಯೇ ಹಿಂದೂಗಳು ಹೆಚ್ಚು ಸಹಿಷ್ಣುತೆ ಹೊಂದಿದವರು: ಜಾವೇದ್ ಅಖ್ತರ್

ಮುಂಬೈ: ಇಡೀ ಜಗತ್ತಿನಲ್ಲಿಯೇ ಹಿಂದೂಗಳು ಹೆಚ್ಚು ಸಹಿಷ್ಣುತೆ ಹೊಂದಿರುವ ಬಹುಸಂಖ್ಯಾತರು ಎಂದು ಬಾಲಿವುಡ್ ನ ಹಿರಿಯ ಗೀತೆ ರಚನೆಕಾರ, ಸಾಹಿತಿ ಜಾವೇದ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರದ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಜಾವೇದ್ ಅಖ್ತರ್ ಬರೆದಿರುವ ಲೇಖನದಲ್ಲಿ, ಭಾರತವನ್ನು ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನಕ್ಕೆ ಹೋಲಿಕೆ ಮಾಡಲಾಗದು ಭಾರತೀಯರು ಸ್ವಭಾವತಃ ಸಹಿಷ್ಣುತೆ ಉಳ್ಳವರಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ನಡೆದ ನನ್ನ ಸಂದರ್ಶನವೊಂದರಲ್ಲಿ ಹಿಂದೂಗಳು ಇಡೀ ಜಗತ್ತಿನಲ್ಲಿಯೇ ತುಂಬಾ ಶಿಸ್ತಿನ ಮತ್ತು ಸಹಿಷ್ಣುತೆ ಹೊಂದಿರುವ ಬಹುಸಂಖ್ಯಾತರು ಎಂಬುದಾಗಿ ಹೇಳಿದ್ದೆ, ಈಗಲೂ ನಾನು ಅದನ್ನೇ ಮತ್ತೆ ಹೇಳುತ್ತಿದ್ದೇನೆ ಭಾರತ ಎಂದಿಗೂ ಅಫ್ಘಾನಿಸ್ತಾನದಂತೆ ಆಗಲು ಸಾಧ್ಯವಿಲ್ಲ. ಯಾಕೆಂದರೆ ಭಾರತೀಯರು ಸ್ವಭಾವತಃ ಉಗ್ರ ಮನಸ್ಥಿತಿ ಹೊಂದಿಲ್ಲ. ಭಾರತೀಯರ ಡಿಎನ್ಎ ಯಲ್ಲೇ ಸೌಮ್ಯ ಭಾವನೆ ಇದೆ ಎಂದು ಅಖ್ತರ್ ಸಾಮ್ನಾದಲ್ಲಿ ಬರೆದಿದ್ದಾರೆ.
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ನಂತರ ಅಲ್ಲಿನ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ್ದ ಸಂದರ್ಭದಲ್ಲಿ ಜಾವೇದ್ ಅಕ್ತರ್ ತಾಲಿಬಾನ್ ಮನಸ್ಥಿತಿಯನ್ನು ಭಾರತದ ಆರ್ ಎಸ್ ಎಸ್ ಗೆ ಹೋಲಿಕೆ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿ ಜಾವೆದ್ ಅಖ್ತರ್ ಕ್ಷಮೆಯಾಚಿಸಬೇಕು ಅವರು ಕ್ಷಮೆಯಾಚಿಸುವವರೆಗೆ ಅವರ ಸಿನಿಮಾಗಳನ್ನು ನಿಷೇಧಿಸಬೇಕು ಎಂದು ಹಿಂದೂ ಸಂಘಟನೆಗಳು ಕರೆ ನೀಡಿದ್ದವು.
