
ನವದೆಹಲಿ: ಉಡುಪಿ ಕಾಲೇಜಿನಿಂದ ಆರಂಭವಾದ ಹಿಜಾಬ್ ಕಿಚ್ಚು ರಾಜ್ಯದ ನಂತರ ಇದೀಗ ರಾಷ್ಟ್ರ ಮಟ್ಟಕ್ಕೂ ಹರಡತೊಡಗಿದೆ. ರಾಷ್ಟ್ರದ ರಾಜಧಾನಿ ದೆಹಲಿಯ ಕರ್ನಾಟಕ ಭವನದ ಎದುರು ಏಐಎಸ್ಎ (AISA)ಕಾರ್ಯಕರ್ತರು ಪ್ರತಿಭಟಿಸಿದ ಬೆನ್ನಲ್ಲೇ ಶುಕ್ರವಾರ ಮಹಾರಾಷ್ಟ್ರದ ಮಾಲೆಗಾಂವ್ ನಲ್ಲಿ ಗುರುವಾರ ಹಿಬಾಬ್ ಬೆಂಬಲಿಸಿ ಹಾಗೂ ಹಿಜಾಬ್ ಸಂಬಂಧಿಸಿದ ಕರ್ನಾಟಕ ಸರ್ಕಾರದ ವಸ್ತ್ರಸಂಹಿತೆ ಆದೇಶದ ವಿರುದ್ಧ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಇದಲ್ಲದೆ ಕೇರಳ ಸೇರಿದಂತೆ ದೇಶದ ಹಲವೆಡೆ ಅಲ್ಲಲ್ಲಿ ಪ್ರತಿಭಟನೆಗಳು ಜರುಗಿವೆ. ಈ ನಡುವೆ ಶುಕ್ರವಾರ ಬೆಳಗ್ಗೆ ಪ್ರಕರಣವನ್ನು ರಾಷ್ಟ್ರೀಯ ಮಟ್ಟಕ್ಕೆ ತಾರದಂತೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ.
ಮಾಲೆಗಾಂವ್ ನಲ್ಲಿ ನಡೆದ ಹಿಜಾಬ್ ಪ್ರತಿಭಟನೆ ಕುರಿತು, ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಮೊದಲನೆಯದಾಗಿ ಎಲ್ಲೂ ಪ್ರತಿಭಟನೆ ಮಾಡಲು ಅವಕಾಶವಿಲ್ಲ. ಯಾರಾದರೂ ಪ್ರತಿಭಟನೆ ಮಾಡಿದರೆ ಶಾಂತಿಯುತವಾಗಿ ಮಾಡಿ. ರಾಜಕೀಯ ಪಕ್ಷಗಳ ನಾಯಕರು ಪ್ರಚೋದನೆ ನೀಡದೆ, ಶಾಂತಿ ಕಾಪಾಡಬೇಕು. ಪೊಲೀಸರೊಂದಿಗೆ ಸಹಕರಿಸಬೇಕು ಎಂದಿದ್ದಾರೆ.
ಹಿಜಾಬ್ ದಿನ ಅನುಮತಿ ನಿರಾಕರಣೆ
ಈ ನಡುವೆ ನಾಸಿಕ್ ಪೊಲೀಸರು ಹಿಜಾಬ್ ದಿನವನ್ನು ಆಚರಿಸಲು ಅನುಮತಿ ನಿರಾಕರಿಸಿದ್ದಾರೆ. ಶುಕ್ರವಾರ ಮಾಲೆಗಾಂವ್ ನಲ್ಲಿ ಐನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲವೂ ಶಾಂತಿಯುತವಾಗಿದೆ. ಎಂಐಎಂ ಶಾಸಕ ಮುಫ್ತಿ ಇಸ್ಮಾಯಿಲ್ ಖಾಸ್ಮಿ ಮತ್ತು ಇತರ ನಾಲ್ವರಿಗೆ ನೊಟೀಸ್ ಜಾರಿ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರ, ದಾವಣಗೆರೆಯ ಚನ್ನಗಿರಿ, ಹರಿಹರ ಮತ್ತಿತರ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಪರಸ್ಪರ ಅಲ್ಲಿಲ್ಲಿ ಘರ್ಷಣೆಗಳು ನಡೆದಿವೆ. ಪೊಲೀಸರು ಲಾಠ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಸಹಬಂದಿಗೆ ತರುವ ಪ್ರಯತ್ನ ನಡೆಸಿದ್ದಾರೆ.
ಹಿಜಾಬ್-ಕೇಸರಿಶಾಲು ವಿವಾದ ಹೈಕೋರ್ಟ್ ಮೆಟ್ಟಿಲೇರಿದ ಮೇಲೆ ಏಕಸದಸ್ಯಪೀಠದ ನಂತರ ಪ್ರಕರಣದ ವಿಚಾರಣೆ ನಡೆಸಿದ ತ್ರಿಸದಸ್ಯಪೀಠ ಗುರುವಾರ ಮೌಖಿಕ ಆದೇಶ ನೀಡಿ, ಸೋಮವಾರದಿಂದ ಹೈಸ್ಕೂಲ್ ಹಾಗೂ ಕಾಲೇಜು ಆರಂಭವಾಗಲಿದ್ದು ವಿದ್ಯಾರ್ಥಿಗಳು ಧಾರ್ಮಿಕ ಸಂಕೇತಗಳನ್ನು ಸೂಚಿಸುವ ಕೇಸರಿ ಶಾಲು ಮತ್ತು ಹಿಜಾಬ್ ಧರಿಸಬಾರದು ಎಂದು ಹೇಳಿದೆ.
