ಸುಮಲತಾ ವಿರುದ್ಧ ಸಿಡಿದಿದ್ದ ಎಚ್ಡಿಕೆ ಈಗ ಮೌನ; ನಾಡಿಗಾಗಿ ಹೋರಾಡುವ ಮಾತು

ಬೆಂಗಳೂರು: ಸುಮಲತಾ ವಿರುದ್ಧ ಮುಗಿಬಿದ್ದು ಸಭ್ಯತೆ ಮೀರಿ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ನಿನ್ನೆ ಸುಮಲತಾ ಮತ್ತು ರಾಕ್ಲೈನ್ ವೆಂಕಟೇಶ್ ಮಾತಿನ ಬಳಿಕ ವರಸೆ ಬದಲಿಸಿದಂತಿದೆ. ಮತ್ತ ಆ ವಿಚಾರಕ್ಕೆ ಪ್ರತಿಕ್ರಿಯಿಸುವ ಗೋಜಿಗೆ ಹೋಗದೆ, ಕನ್ನಡ ನಾಡು ನುಡಿಗಾಘಿ ಹೋರಾಟುವ ವಿಚಾರ ಮಾತನಾಡಿದ್ದಾರೆ. ಉಳಿದೆಲ್ಲವನ್ನೂ ಉಪೇಕ್ಷಿಸೋಣ ಎಂದು ಟ್ವೀಟ್ ಮಾಡುವ ಮೂಲಕ, ಸುಮಲತಾ ವಿರುದ್ಧದ ಸಮರಕ್ಕೆ ವಿರಾಮ ಹೇಳಿರುವ ಸೂಚನೆ ಕೊಟ್ಟಂತಿದೆ.
ಇಂದು ಒಂದರ ಬೆನ್ನಿಗೊಂದರಂತೆ 4 ಟ್ವೀಟ್ಗಳನ್ನು ಮಾಡಿರುವ ಕುಮಾರಸ್ವಾಮಿ, ಮತ್ತೆ ಮತ್ತೆ ಕನ್ನಡ ನಾಡು ನುಡಿಯ ವಿಚಾರ ಪ್ರಸ್ತಾಪಿಸಿದ್ದಾರೆ. ಕಾವೇರಿ ನೀರಿನ ಯೋಜನೆಗಳಿಗೆ ತಡೆಯೊಡ್ಡುತ್ತಿರುವವರ ವಿರುದ್ಧ, ನಮಗೆ ನೀಡಬೇಕಾದ ಪರಿಹಾರ, ಅನುದಾನ ನೀಡದ ವ್ಯವಸ್ಥೆಯ ವಿರುದ್ಧ ಸಿಡಿಯೋಣ ಎಂದು ಏಕಕಾಲಕ್ಕೇ ತಮಿಳುನಾಡು, ಕೇಂದ್ರ ಸರ್ಕಾರದ ವಿರುದ್ಧವೆಲ್ಲ ಹರಿಹಾಯುತ್ತಿರುವಂತೆ ತೋರಿಸಿಕೊಂಡಿದ್ದಾರೆ.
ನಮ್ಮ ರಾಜಕಾರಣ ಕರ್ನಾಟಕ ಕೇಂದ್ರಿತವಾಗಿರಲಿ. ನಮ್ಮ ಮೇಲಿನ ಆರೋಪಗಳ ಬಗ್ಗೆ ಜನರೇ ತೀರ್ಮಾನಿಸಲಿ ಎಂದು ಕೂಡ ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.
ಗಣಿ ವಿಚಾರವಾಗಿ ಸುಮಲತಾ ಧ್ವನಿಯೆತ್ತಿದ ಬಳಿಕ ಇದ್ದಕ್ಕಿದ್ದಂತೆ ಸಿಟ್ಟಾಗಿದ್ದ ಕುಮಾರಸ್ವಾಮಿ ಮತ್ತು ಜೆಡಿಎಸ್ ಇತರ ನಾಯಕರ ಪಡೆ ಅಕ್ರಮ ಗಣಿಗಾರಿಕೆಯ ರಕ್ಷಣೆಗೆ ನೀಮತವರಂತೆ ಮಾತನಾಡತೊಡಗಿದ್ದರು. ಇವರಿಗೆ ಅಕ್ರಮ ಗಣಿಗಾರಿಕೆಯಿಂದ ಲಾಭ ಬರುತ್ತಿರುವುದಕ್ಕೇ ಹೀಗೆಲ್ಲಾ ಆಡುತ್ತಿದ್ದಾರೆ ಎಂದು ಜೆಡಿಎಸ್ ನಾಯಕರಿಗೆ ಸುಮಲತಾ ಟಾಂಗ್ ಕೊಟ್ಟಿದ್ದರು.
ಇಷ್ಟೆಲ್ಲ ಆದ ಬಳಿಕ ಕುಮಾರಸ್ವಾಮಿಯ ಈಗಿನ ತಣ್ಣಗಿನ ದನಿಯ ಕನ್ನಡ ನಾಡು-ನುಡಿಯ ಪರ ಹೋರಾಟದ ಮಾತುಗಳು ಹೊಮ್ಮಿವೆ.
