ಆತ್ಮಸಾಕ್ಷಿ ಇಲ್ಲದ ಸರ್ಕಾರಕ್ಕೆ ಹಣ ಮಾಡುವುದೇ ದಂಧೆ: ಹೆಚ್. ಡಿ. ಕೆ ಆಕ್ರೋಶ

ಬೆಂಗಳೂರು: ದರ ಏರಿಕೆಯ ಬಿಸಿಯಿಂದ ಜನ ತತ್ತರಿಸಿ ಹೋಗ್ತಿದ್ದಾರೆ. ನಿತ್ಯ ಒಂದಲ್ಲ, ಒಂದು ವಸ್ತುಗಳ ದರ ಏರಿಕೆಯ ಹೊರೆಯನ್ನ ಸರ್ಕಾರ ಜನರ ಮೇಲೆ ಹೇರುತ್ತಲೇ ಇದೆ. ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್, ಹೋಟೆಲ್ ತಿಂಡಿ ತಿನಿಸುಗಳ ಮೇಲೆ ದರ ಹೆಚ್ಚಳ ಮಾಡಲಾಗಿದೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಗರಂ ಆಗಿದ್ದು ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
”ಬಿಜೆಪಿ ಬೆಲೆ ಏರಿಕೆಯ ಪರ್ವ ಮುಂದುವರೆದಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯ ಜತೆ ಜತೆಗೇ, ಈಗ ಕರೆಂಟ್ ಶಾಕ್ ಅನ್ನೂ ಕೊಟ್ಟಿದೆ. ಆತ್ಮಸಾಕ್ಷಿ ಇಲ್ಲದ ಸರಕಾರಕ್ಕೆ ಹಣ ಮಾಡುವುದೇ ದಂಧೆ ಆಗಿಬಿಟ್ಟಿದೆ ಎಂದು ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡನೇ ಟ್ವೀಟ್ ನಲ್ಲಿ ರೈತರು ತಾವು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಇಲ್ಲದೆ ಬೀದಿಯಲ್ಲಿದ್ದಾರೆ. ರಾಗಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಜನರನ್ನು ಬೆಲೆ ಏರಿಕೆ ಬಿಸಿಗೆ ಸಿಲುಕಿಸಿ ಬೆಲೆ ಬಾರುಕೋಲು ಅಭಿಯಾನವನ್ನು ಬಿಜೆಪಿ ಸರಕಾರ ಶುರು ಮಾಡಿದೆ. ಲೋಡ್ ಶೆಡ್ಡಿಂಗ್ ತೆಗೆದು ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದು ಸರಕಾರದ ಕರ್ತವ್ಯ ಎಂದಿದ್ದಾರೆ.
ಮೂರನೇ ಟ್ವೀಟ್ ನಲ್ಲಿ ವಿದ್ಯುತ್ ಕೊರತೆಯೇ ಇಲ್ಲ ಎನ್ನುವ ಸರಕಾರ, ಈಗ ದರ ಏರಿಕೆ ಮಾಡಿದ್ದು ಏಕೆ? ಜನರ ಮೇಲೆ ಭಾರ ಹೊರೆಸಿ ವಿದ್ಯುತ್ ಅನ್ನು ಸರಕಾರ ಕಳ್ಳ ಮಾರ್ಗದಲ್ಲಿ ಮಾರಿಕೊಳ್ಳುತ್ತಿದೆಯಾ? ಇಲ್ಲ ಎನ್ನುವುದಾದರೆ ದರ ಏರಿಕೆ ಹಿಂಪಡೆಯಲಿ ಎಂದು ಟ್ವೀಟ್ ಮಾಡಿದ್ದಾರೆ.
