ತಮಿಳುನಾಡು ಪರವಾಗಿ ಮೆಲುಧ್ವನಿಯಲ್ಲಿ ಘರ್ಜಿಸುತ್ತಿರುವ ಸಿಂಗಂ!

-ಕಿರುಗುಂದ ರಫೀಕ್
ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಓರ್ವ ಉತ್ತಮ ವರಿಷ್ಠಾಧಿಕಾರಿಯಾಗಿ, ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾಗಿ ಜನರ ಮನಗೆದ್ದಿದ್ದ ಅಣ್ಣಾಮಲೈ ತಾವಿದ್ದ ಕಾರ್ಯಾಂಗದ ಸ್ಥಾನ ತ್ಯಜಿಸಿ ಇದ್ದಕ್ಕಿದ್ದಂತೆ ರಾಜಕೀಯ ಪ್ರವೇಶಿಸಿ ತಮಿಳುನಾಡು ಬಿಜೆಪಿ ಘಟಕದಲ್ಲಿ ಗುರುತಿಸಿಕೊಂಡು ಪಕ್ಷದ ರಾಜ್ಯಾಧ್ಯಕ್ಷರಾಗಿ ಈಗ ಎರಡೂ ರಾಜ್ಯಗಳ ವಿವಾದಗಳ ಕುರಿತು ಮಾತನಾಡುವಾಗ ಇಕ್ಕಟ್ಟಿಗೆ ಸಿಲುಕುತ್ತಿರುವುದು ಕಂಡುಬಂದಿದೆ.
ತಮಿಳುನಾಡಿನ ಪರವಾಗಿ ಏರುಧ್ವನಿಯಲ್ಲಿ ಮಾತಾಡಿದರೆ ಇತ್ತ ಕನ್ನಡಿಗರು ಕೆರಳುತ್ತಾರೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿರುವುದರಿಂದ ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ಹೆಚ್ಚು ಬೈಯುವಂತಿಲ್ಲ. ಇನ್ನು ತಮಿಳುನಾಡು ಸರ್ಕಾರದ ಪರವಾಗಿಯೇ ಮಾತನಾಡುತ್ತಿದ್ದರೆ ತನ್ನ ರಾಜಕೀಯ ಮತ್ತು ಬಿಜೆಪಿಯ ಬೆಳವಣಿಗೆಗೇ ನಷ್ಟ. ಹೀಗಾಗಿ ಅಳೆದೂ ತೂಗಿ ಮಾತನಾಡಬೇಕಾದ ಅನಿವಾರ್ಯತೆ ಅಣ್ಣಾಮಲೈಗೆ ಎದುರಾಗಿದೆ!
ಮೇಕೆದಾಟು ವಿಷಯದಲ್ಲಿ ಅಣ್ಣಾಮಲೈ ಮೆಲುಧ್ವನಿಯಲ್ಲೇ ಪ್ರತಿಕ್ರಿಯಿಸುತ್ತಿದ್ದಾರೆ. ಮೇಕೆದಾಟು ಅಣೆಕಟ್ಟು ವಿಷಯದಲ್ಲಿ ತಮಿಳುನಾಡು ರೈತರಿಗೆ ಅನ್ಯಾಯವಾಗಬಾರದು. ಈ ವಿಷಯದಲ್ಲಿ ನಾವು ರಾಜಕೀಯ ಮಾಡೋದಿಲ್ಲ. ರೈತರ ಹಿತ ಕಾಪಾಡುವ ದೃಷ್ಟಿಯಿಂದ ರೈತರನ್ನು ಬೆಂಬಲಿಸುತ್ತೇವೆ. ಮತ್ತು ತಮಿಳುನಾಡು ಸರ್ಕಾರದ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ತಮಿಳುನಾಡಿನ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಯಾವುದೇ ಸಂಕಷ್ಟ ಎದುರಾಗಬಾರದು. ಸರ್ವೋಚ್ಛ ನ್ಯಾಯಾಲಯ ಹೇಳಿರುವಂತೆ ಕಾವೇರಿ ನೀರಿನ ಪಾಲನ್ನು ಪಡೆಯಬೇಕು. ಮೇಕೆದಾಟು ವಿವಾದ ಪರಿಹರಿಸಲು ಸರ್ವಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಅಣ್ಣಾಮಲೈ ಅಭಿಪ್ರಾಯಿಸಿದ್ದಾರೆ.
ಒಟ್ಟಿನಲ್ಲಿ ಕರ್ನಾಟಕದಲ್ಲಿ ʼಸಿಂಗಂʼ ಆಗಿ ಮಿಂಚಿದ್ದ ಅಣ್ಣಾಮಲೈ ರಾಜಕೀಯ ಪ್ರವೇಶಿಸಿದ ಮೇಲೆ ತಮಗಿದ್ದ ಇಮೇಜಿಗೆ ಡ್ಯಾಮೇಜಾಗಿರುವುದಂತೂ ಸುಳ್ಳಲ್ಲ.
