ತೈಲ ಬೆಲೆ ಹೆಚ್ಚಳಕ್ಕೆ ಮೋದಿ ಮಾತ್ರ ಅಲ್ಲ ಕಾಂಗ್ರೆಸ್ ಕೂಡ ಕಾರಣ: ಕುಮಾರಸ್ವಾಮಿ
ಬೆಂಗಳೂರು: ಪೆಟ್ರೋಲ್ ಡಿಸೇಲ್ ಹೆಚ್ಚಳ ಆಗಲು ಮೋದಿ ಮಾತ್ರ ಅಲ್ಲ ಕಾಂಗ್ರೆಸ್ ಕೂಡ ಕಾರಣ. ಮನಮೋಹನ್ ಸಿಂಗ್ ಅಧಿಕಾರದ ಅವಧಿಯಲ್ಲಿ ನೀಡಿದ ಬಾಂಡ್ ಗಳು ಅವಧಿ ಮೀರಿವೆ. ಈಗ ಆ ದುಡ್ಡನ್ನ ಕೊಡಬೇಕು ಎರಡು ರಾಷ್ಟ್ರೀಯ ಪಕ್ಷಗಳು ಸೇರಿ ಈ ಸ್ಥಿತಿಗೆ ತರಿಸಿವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಗಲ್ ಹನುಮಂತಯ್ಯ ಕಟ್ಟಿಸಿದ ಖಜಾನೆಗೆ ದರಿದ್ರ ಬಂದಿಲ್ಲ. ಅದು ಸಮೃದ್ದವಾಗಿದೆ. ಆದರೆ, ದರಿದ್ರ ಬಂದಿರುವು ರಾಜಕಾರಣಿಗಳಿಗೆ. ಬರಿ ಕೈಯಲ್ಲಿ ಈಗ ಖಜಾನೆಯನ್ನ ಬಾಚ್ತಾ ಇಲ್ಲ. ಬದಲಾಗಿ ಜೆಸಿಬಿಯಲ್ಲಿ ಬಾಚುತ್ತಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಆ 17 ಜನ ಕಾರಣ ಎನ್ನುತ್ತಾರೆ. ನನ್ನ ಅಧಿಕಾರದಿಂದ ತೆಗೆದದ್ದು 17 ಜನ ಅಲ್ಲ. ಅವರು ನನ್ನ ಜೀವ ಉಳಿಸಿದ ಪುಣ್ಯಾತ್ಮರು. ನನಗೆ ಅವರ ಬಗ್ಗೆ ಯಾವುದೇ ಬೇಜಾರಿಲ್ಲ ಎಂದರು.
ದೇಶದಲ್ಲಿ ರಾಷ್ಟ್ರೀಯ ಪಕ್ಷಗಳು ಪತನವಾಗಿವೆ. ಜನ ಪ್ರಾದೇಶಿಕ ಪಕ್ಷಗಳತ್ತ ಒಲವು ತೋರಿದ್ದಾರೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ಗೆ ಶಕ್ತಿ ಇಲ್ಲ. ಜೆಡಿಎಸ್ ಕಾರ್ಯದಿಂದ ಅಂದು ಬಿಜೆಪಿ ಮೂರು ಭಾಗ ಆಗಿತ್ತು. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಎಂದು ತಿಳಿಸಿದರು.
2013ರಲ್ಲಿ ಇದು ನನ್ನ ಕೊನೆ ಚುನಾವಣೆ ಎಂದಿದ್ದರು. ಈಗ ಅವರೇ ಮುಂದಿನ ಸೀಟು ಹುಡುಕುತ್ತಿದ್ದಾರೆ. ಚುನಾವಣೆಗೆ ಇನ್ನೂ ಎರಡು ವರ್ಷ ಸಮಯವಿದೆ. ಆದರೆ, ಈಗಲೇ ಅಧಿಕಾರದ ಅಸೆ ಶುರುವಾಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಕುಟುಕಿದರು.
ನಾನೇ ಎರಡು ವರ್ಷ ಮುಖ್ಯಮಂತ್ರಿ ನನ್ನ ನಾಯಕತ್ವದಲ್ಲೆ ಮುಂದಿನ ಚುನಾವಣೆ ಎಂದಿದ್ದಾರೆ. 130 ಸೀಟು ಗೆಲ್ತಾರೆ ಅಂತ ಹೇಳಿಕೊಂಡಿದ್ದಾರೆ. ನಿಮ್ಮ ಭ್ರಷ್ಟಾಚಾರಕ್ಕೆ ಈ ಬಾರಿ ಜನ ನಿಮಗೆ ಬುದ್ದಿ ಕಲಿಸುತ್ತಾರೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
