ಜೆಡಿಎಸ್ ಪಕ್ಷದ ಬಾಗಿಲು ದೊಡ್ಡದಾಗಿ ತೆರೆದಿದೆ, ಹೋಗೋರು ಹೋಗಬಹುದು: ಕುಮಾರಸ್ವಾಮಿ

ಮೈಸೂರು: ಜೆಡಿಎಸ್ ಪಕ್ಷದ ಬಾಗಿಲು ದೊಡ್ಡದಾಗಿ ತೆರೆದಿದೆ. ಬರುವವರು ಬರಬಹುದು, ಹೋಗೋರು ಹೋಗಬಹುದು ಎಂದು ಜಿ ಟಿ ದೇವೇಗೌಡರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮಾಜಿ ಸಚಿವ ಜಿ.ಟಿ.ದೇವೆಗೌಡ ಪಕ್ಷ ತೊರೆಯುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎರಡು ವರ್ಷದ ಹಿಂದೆ ಪಕ್ಷದಿಂದ ದೂರ ಸರಿದಿದ್ದೇನೆ ಎಂದು ಅವರೇ ಹೇಳಿದ್ದಾರೆ. ಈಗ ಒಂದು ನೆಪ ಹೇಳಿ ಹೋಗೋಕೆ ಮುಂದಾಗಿದ್ದಾರೆ. ದ್ರಾಕ್ಷಿ ಕೈಗೆಟಕುದಿದ್ದಾಗ ನರಿ ಹೇಳುವ ಕಥೆಯಂತಾಗಿದೆ. ಈಗ ನನ್ನಿಂದ ಹೊರ ಹೋಗುವುದಾದರೆ 2008 ರಲ್ಲಿ ಯಾವ ಕಾರಣಕ್ಕಾಗಿ ಬಿಜೆಪಿಗೆ ಹೋದರು ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಅರುಣ್ ಸಿಂಗ್ ಹೇಳಿಕೆಗೆ ಕುಮಾರಸ್ವಾಮಿ ಕೆಂಡಾಮಂಡಲ:
ಕರ್ನಾಟಕ ಹಾಗೂ ಇಲ್ಲಿನ ಸ್ಥಳೀಯ ಪಕ್ಷದ ಬಗ್ಗೆ ಆತನಿಗೆ ಮಾಹಿತಿ ಇಲ್ಲ. ಪಾಪ ಅವರಿಗೆ ಏನು ಗೊತ್ತು. ನಾವೇನು ಅವರ ಮನೆ ಬಾಗಿಲಿಗೆ ಹೋಗಿದ್ವಾ.? ಮೈಸೂರು ಮೇಯರ್ ಆಯ್ಕೆ ಚುನಾವಣೆಯಲ್ಲಿ ಬೆಂಬಲ ಕೋರಿ ಶಾಸಕ ಸಾ ರಾ ಮಹೇಶ್ ಕಚೇರಿಗೆ ಬಿಜೆಪಿ ನಾಯಕರು ಏಕೆ ಬಂದಿದ್ರು?. ನಾವೇನು ಬೆಂಬಲ ಕೋರಿ ಅವರ ಬಳಿಗೆ ಹೋಗಿಲ್ಲ. ಅರುಣ್ ಸಿಂಗ್ ರಾಜ್ಯದ ವಾಸ್ತವ ಪರಿಸ್ಥಿತಿ ಗೊತ್ತಿಲ್ಲ. ಇಲ್ಲಿ ಬಿಜೆಪಿ ಸರ್ಕಾರ ಇರೋದ್ರಿಂದ ವಸೂಲಿಗಾಗಿ ಆಗಾಗ್ಗೆ ಭೇಟಿ ನೀಡುತ್ತಾರೆ. ಜೆಡಿಎಸ್ ಬಗ್ಗೆ ಯಾರೂ ಕೂಡ ಹಗುರವಾಗಿ ಮಾತನಾಡಬಾರದು ಎಂದು ತಿಳಿಸಿದರು.
ಮನೆ ಮಾಡುವುದೇ ಮುಖ್ಯವಲ್ಲ:
ಮಂಡ್ಯದಲ್ಲಿ ಸಂಸದೆ ಸುಮಲತಾ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮನೆ ಮಾಡುವುದೇ ಮುಖ್ಯವಲ್ಲ. ಜನರನ್ನು ಭೇಟಿ ಮಾಡಿ ಸಮಸ್ಯೆ ಕೇಳೋದು ಮುಖ್ಯ. ಸುಮಲತಾ ಅವರು ಮನೆ ಮಾಡಿದರೆ ಸಂತೋಷ. ಇದರಿಂದ ನಮ್ಮ ಮೇಲಿನ ಒತ್ತಡ ಕಡಿಮೆ ಆಗುತ್ತೆ. ಮನೆ ಮಾಡಿದ ಬಳಿಕ ಮನೆಯೊಳಗೆ ಕುಳಿತರೆ ಪ್ರಯೋಜನ ಆಗಲ್ಲ. ನಾನು ರಾಮನಗರ, ಚನ್ನಪಟ್ಟಣದಲ್ಲಿ ಮನೆ ಮಾಡಿದ್ದೀನಾ ? ಸಾ.ರಾ.ಮಹೇಶ್ ಕೂಡ ಕೆ.ಆರ್. ನಗರದಲ್ಲಿ ಮನೆ ಮಾಡಿಲ್ಲ. ಜನರೊಂದಿಗೆ ಹೇಗೆ ಸಂಪರ್ಕದಲ್ಲಿ ಇರಬೇಕು ಅನ್ನೋದು ನಮ್ಮ ಮೇಲೆಯೇ ಇದೆ ಎಂದರು.
