ರೈತರಿಗಾಗಿ ಬಾಗಲಕೋಟೆ ಮೂಲದ ಟೆಕ್ಕಿಯಿಂದ ‘ದೆಹಲಿ ಚಲೋ’

ಕಾರವಾರ : ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಗಳನ್ನು ಬೆಂಬಲಿಸಿ ಹಾಗೂ ಅವರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲು ಬಾಗಲಕೋಟೆ ಮೂಲದ ಟೆಕ್ಕಿಯೊಬ್ಬರು ಮಳೆ, ಗಾಳಿ, ಚಳಿಯನ್ನೂ ಲೆಕ್ಕಿಸದೇ”ದೆಹಲಿ ಚಲೋ ಪ್ರತಿಭಟನೆ” ಪಾದಯಾತ್ರೆ ಹಮ್ಮಿಕೊಂಡಿದ್ದು, ಕಾರವಾರ ನಗರ ಪ್ರವೇಶಿಸಿದರು.
ಖಾಸಗಿ ಕಂಪನಿಯೊಂದರಲ್ಲಿ ಆಪರೇಷನ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಾಗರಾಜ್ ಕಲ್ಗುಟ್ಕರ್, ದೆಹಲಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. “ಕೇಂದ್ರ ಸರಕಾರ ಮೂರು ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು, ವೈಜ್ಞಾನಿಕ ಬೆಂಬಲ ಬೆಲೆ ನಿಗದಿಗೊಳಿಸಬೇಕು.ರೈತರ ಮೇಲೆ ಸರ್ವಾಧಿಕಾರಿ ಧೋರಣೆಯಿಂದ ದಬ್ಬಾಳಿಕೆ ನಡೆಸುವುದು ಸರಿಯಲ್ಲ.”
ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಜನತೆ ಸಹ ಖಂಡಿಸಬೇಕು. ರೈತರು ಕೈಗೊಂಡಿರುವ ನ್ಯಾಯಯುತ ಹೋರಾಟಕ್ಕೆ ಬೆಂಬಲಿಸಿ ಹೋರಾಟದಲ್ಲಿ ನನ್ನದೂ ಒಂದು ಪಾಲಿರಲಿ ಎಂಬ ಉದ್ದೇಶದಿಂದ ಪಾದಯಾತ್ರೆ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಫೆ.11ರಂದು ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಿಂದ ಪಾದಯಾತ್ರೆ ಆರಂಭಿಸಿರುವ ನಾಗರಾಜ ಕಲ್ಗುಟ್ಕರ್, ಏ.23 ಕ್ಕೆ ಚಿತ್ರದುರ್ಗ ತಲುಪಿದ್ದರು.ಕೊರೋನಾ ಕಾರಣದಿಂದ ಜುಲೈ 3 ರವರೆಗೆ ಅಲ್ಲೇ ವಾಸ್ತವ್ಯ ಹೂಡಬೇಕಾಗಿ ಬಂತು. ತದ ನಂತರ ಮತ್ತೆ ಪಾದಯಾತ್ರೆ ಆರಂಭಿಸಿದ ಇವರು ಕಾರವಾರ ಪ್ರವೇಶಿಸಿದ್ದು, ಇಲ್ಲಿಂದ ಬೆಳಗಾವಿ,ವಿಜಯಪುರ ಇನ್ನಿತರ ಉತ್ತರ ಕರ್ನಾಟಕದ ಜಿಲ್ಲೆಗಳನ್ನು ದಾಟಿ, ಮಹಾರಾಷ್ಟ್ರ,ಮಧ್ಯಪ್ರದೇಶದ ಮೂಲಕ ದೆಹಲಿಗೆ ತೆರಳಲಿದ್ದಾರೆ.
ದೆಹಲಿಯಲ್ಲಿ ರೈತರ ಹೋರಾಟದಲ್ಲಿ ಭಾಗವಹಿಸಿ, ವಿವಿಧ ರೈತ ಮುಖಂಡರುಗಳನ್ನು ಅವರು ಭೇಟಿಯಾಗಿ ಚರ್ಚಿಸಲಿದ್ದಾರೆ.ಒಟ್ಟಾರೆ ಕರ್ನಾಟಕ ಯಾತ್ರೆ ಮುಗಿದ ಬಳಿಕ ನೇರವಾಗಿ ಪ್ರಧಾನಮಂತ್ರಿ ಕಛೇರಿಗೆ ತಮ್ಮ ಯಾತ್ರೆಯ ಕುರಿತು ಆಗ್ರಹ ಪತ್ರ ಬರೆಯುವುದಾಗಿ ನಾಗರಾಜ್ ತಿಳಿಸಿದ್ದಾರೆ.
ಎಂ.ಎಸ್ಸಿ, ಎಂ.ಟೆಕ್ ಪದವೀಧರರಾಗಿರುವ ನಾಗರಾಜ್, ಖಾಸಗಿ ಕಂಪನಿಯಲ್ಲಿ ಕೈತುಂಬ ವೇತನ ಪಡೆಯುವ ನೌಕರಿಯಲ್ಲಿದ್ದರು. ಹಲವು ವರ್ಷ ವಿದೇಶದಲ್ಲಿ ಕೂಡ ಕಾರ್ಯನಿರ್ವಹಿಸಿದ್ದರು. 2015 ರ ಬಳಿಕ ಭ್ರಷ್ಟಾಚಾರ ವಿರೋಧಿ ಹೋರಾಟ ಸೇರಿದಂತೆ ಇತರ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಇದೀಗ ಮಲೆಮಹದೇಶ್ವರ ಬೆಟ್ಟದಿಂದ ದೇಶದ ರಾಜಧಾನಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಸರ್ಕಾರಗಳು ಜನವಿರೋಧಿ ನೀತಿಗಳನ್ನು ಜಾರಿಗೆ ತರಲು ಹೊರಟಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕು ಸಂವಿಧಾನ ಎಲ್ಲರಿಗೂ ನೀಡಿದೆ. ಸಂವಿಧಾನದ ಚೌಕಟ್ಟಿನಲ್ಲೇ ರೈತರ ಹೋರಾಟಗಳು ನಡೆಯುತ್ತಿದ್ದು, ನಾನು ಕೂಡ ಅದರಡಿಯಲ್ಲೇ ಯಾತ್ರೆ ಹಮ್ಮಿಕೊಂಡಿದ್ದೇನೆ. ಅಲ್ಲಲ್ಲಿ ನನಗೂ ಕೆಲವರು ಆತಂಕವನ್ನುಂಟು ಮಾಡುವ ಕಾರ್ಯ ಮಾಡಿದರೂ, ಅಗತ್ಯಬಿದ್ದಲ್ಲಿ ಪೊಲೀಸರ ಸಹಾಯ ಪಡೆಯುತ್ತಿದ್ದೇನೆ ಎನ್ನುತ್ತಾರೆ ಪಾದಯಾತ್ರಿಕ ನಾಗರಾಜ ಕಲ್ಗುಟ್ಕರ್.
