ಆನೆಗಳ ದಾಳಿ: ರೈತನ ತೋಟ ನಾಶ!

ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯ ಲಂಬಾಣಿದೊಡ್ಡಿ ಗ್ರಾಮದಲ್ಲಿ ನಾಲ್ಕು ಆನೆಗಳು ಕೆ.ಪಿ ದೊಡ್ಡಿ ಗ್ರಾಮದ ವಾಸು ಪುಟ್ಟಮಾಸ್ತಿಗೌಡ ಎಂಬ ರೈತನ ತೋಟಕ್ಕೆ ನುಗ್ಗಿ ತೆಂಗು, ಅಡಿಕೆ, ಬಾಳೆ ಗಿಡಗಳನ್ನ ಹಾಳು ಮಾಡಿರೋದಲ್ಲದೆ, ನೀರಿಗಾಗಿ ಅಳವಡಿಸಿದ್ದ ಪೈಪುಗಳನ್ನು ನಾಶಪಡಿಸಿವೆ. ಕಾವೇರಿ ವನ್ಯಜೀವಿ ಧಾಮದಿಂದ ಬಂದಿರುವ ನಾಲ್ಕು ಆನೆಗಳ ತಂಡ ಹಂದಿಗೊಂದಿ ಅರಣ್ಯ ಸೇರಿಕೊಂಡು ರಾತ್ರಿ ವೇಳೆಯಲ್ಲಿ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚರಿಸಿ ರೈತರ ಫಸಲು ನಾಶಪಡಿಸುತ್ತಿವೆ.
ಕಳೆದ ಮೂರು ದಿನಗಳ ಹಿಂದಷ್ಟೇ ಒಂಟಿ ಆನೆ ಬಾಳೆ ತೋಟಕ್ಕೆ ನುಗ್ಗಿ ಬಾಳೆ ಗಿಡಗಳನ್ನ ನಾಶಪಡಿಸಿತ್ತು. ರಾತ್ರಿ ಬಂದ ಆನೆಗಳ ಹಿಂಡು ಬಾಳೆ ತೋಟ, ಅಡಿಕೆ ಸಸಿ, ತೆಂಗಿನ ಮರಗಳನ್ನು ಅಪಾರ ಪ್ರಮಾಣದಲ್ಲಿ ನಾಶಪಡಿಸಿವೆ. ಆನೆಗಳ ದಾಳಿಯಿಂದ ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದ ಬಾಳೆತೋಟ, ಅಡಿಕೆ ಸಸಿಗಳು ನಾಶವಾಗಿದೆ. ಕೂಡಲೇ ಆನೆಗಳನ್ನು ಅವುಗಳ ಸ್ವಸ್ಥಾನಕ್ಕೆ ಸೇರಿಸಿ ಪದೇ ಪದೇ ಆನೆಗಳು ಹಂದಿಗೊಂದಿ ಅರಣ್ಯಕ್ಕೆ ಬರುವುದನ್ನು ತಪ್ಪಿಸಬೇಕು ಎನ್ನುತ್ತಾರೆ ರೈತ ವಾಸು ಪುಟ್ಟಮಾಸ್ತಿಗೌಡ. ಈ ಕೂಡಲೇ ಅರಣ್ಯ ಇಲಾಖೆ ಆನೆಗಳನ್ನ ವಾಪಸ್ ವನ್ಯಜೀವಿ ಧಾಮಕ್ಕೆ ಕಳಿಸುವ ಕಾರ್ಯಚರಣೆ ಮಾಡಬೇಕಿದೆ.
