ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ರೈತ ಸಂಘದಿಂದ ರಸ್ತೆ ತಡೆ

ಚಿಕ್ಕಮಗಳೂರು: ಸ್ವಾಮಿನಾಥನ್ ವರದಿ ತಕ್ಷಣ ಜಾರಿಗೆ ತರಬೇಕು ಎಂದು ರೈತ ಸಂಘದಿಂದ ಜಿಲ್ಲಾ ಪಂಚಾಯಿತಿ ಮುಂಭಾಗ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮುಖಂಡ ದುಗ್ಗಪ್ಪಗೌಡ ಮಾತನಾಡಿ, ಮನ್ಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಸ್ವಾಮಿನಾಥನ್ ವರದಿ ಸಲ್ಲಿಕೆಯಾಗಿತ್ತಾದರೂ 10 ವರ್ಷಗಳ ಕಾಲ ಕಾಂಗ್ರೆಸ್ ಅದನ್ನು ಜಾರಿಗೆ ತರಲಿಲ್ಲ. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ವರದಿ ಜಾರಿಗೆ ತರುವುದಾಗಿ ಘೋಷಿಸಿದ್ದರೂ ಇನ್ನೂ ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು.
ರೈತವಿರೋಧಿ ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಸರ್ಕಾರ ಹೇಳಿದ್ದರೂ ರಾಷ್ಟ್ರಪತಿಗಳ ಸಹಿ ಆಗಬೇಕಾಗಿದೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ 1 ವರ್ಷದಿಂದ ನಿರಂತರ ಚಳವಳಿ ನಡೆಯುತ್ತಿರುವಾಗ ಹೋರಾಟ ಹತ್ತಿಕ್ಕಲು ರೈತರ ಹತ್ಯೆ ಸೇರಿದಂತೆ ವಿವಿಧ ವಾಮಮಾರ್ಗ ಸಂಚನ್ನು ಕೇಂದ್ರ ಸರ್ಕಾರ ಅನುಸರಿಸಿತ್ತು ಎಂದು ಆರೋಪಿಸಿದರು.
ಪ್ರತಿಭಟನೆ ವೇಳೆ ಜಿಲ್ಲಾ ಪಂಚಾಯಿತಿ ಎದುರು ಹೆದ್ದಾರಿ ತಡೆಗೆ ರೈತ ಸಂಘದ ಕಾರ್ಯಕರ್ತರು ಮುಂದಾಗುತ್ತಿದ್ದಂತೆ ಪೊಲೀಸರು ಬಂಧಿಸಲು ಮುಂದಾಗಿದ್ದು ಪ್ರತಿಭಟನಾಕಾರರ ಆಕ್ರೋಶಕ್ಕೆ ಗುರಿಯಾಯಿತು. ಕೆಲಕಾಲ ರಸ್ತೆ ತಡೆ ನಡೆಸಿದಾಗ ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಮುಖಂಡರಾದ ದಯಾಕರ್, ನಿರಂಜನಮೂರ್ತಿ, ವಸಂತ ಹೆಗ್ಡೆ, ಉದ್ದೇಗೌಡ, ಓಂಕಾರಪ್ಪ, ತುಳಸೇಗೌಡ ಮುಂತಾದವರಿದ್ದರು.
