ಪೋಷಕರ ವಿರೋಧಕ್ಕೆ ಹೆದರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ

ಮೈಸೂರು ; ಮನೆಯವರ ವಿರೋಧದ ನಡುವೆ ಪ್ರೀತಿಸಿ ಕೆಲ ತಿಂಗಳ ಹಿಂದೆ ಮನೆ ತೊರೆದಿದ್ದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಸಿಂಗರ ಮಾರನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಅಪ್ರಾಪ್ತೆ (17) ಹಾಗೂ ಇದೇ ಗ್ರಾಮದ ರಾಕೇಶ್ (24) ಎಂಬುವರು ನೇಣಿಗೆ ಶರಣಾಗಿದ್ದಾರೆ. ಮಗಳು ಕಾಣೆಯಾಗಿರುವ ಬಗ್ಗೆ ತಂದೆ ಕುಮಾರ್ ಅವರು 2021ರ ಸೆಪ್ಟೆಂಬರ್ 23ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇತ್ತ ತಮ್ಮ ಪುತ್ರ ಕಾಣೆಯಾಗಿದ್ದಾರೆಂದು ವಾರದ ನಂತರ 2021ರ ಸೆಪ್ಟೆಂಬರ್ 29ರಂದು ರಾಕೇಶ್ ತಂದೆ ವಿಜಯಕುಮಾರ್ ಸಹ ದೂರು ನೀಡಿದ್ದರು. ಆದರೆ ಈವರೆಗೂ ಪ್ರೇಮಿಗಳಿಬ್ಬರೂ ಪತ್ತೆಯಾಗಿರಲಿಲ್ಲ. ನಿನ್ನೆ ರಾತ್ರಿ ಅಪ್ರಾಪ್ತೆ ಮತ್ತು ರಾಕೇಶ್ ಸಿಂಗರಮಾರನಹಳ್ಳಿ ಗ್ರಾಮಕ್ಕೆ ಬಂದಿದ್ದರು ಎನ್ನಲಾಗಿದೆ.
ಬಳಿಕ ಊರಿನ ಹೊರವಲಯದಲ್ಲಿರುವ ಜಮೀನಿನಲ್ಲಿದ್ದ ಹಲಸಿನಮರಕ್ಕೆ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
