ಧಾರವಾಡದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ: ಕಾಲಾವಕಾಶ ಕೋರಿದ ಅಂಗಡಿ ಮಾಲೀಕರು

ಧಾರವಾಡ: ರಸ್ತೆ ಹಾಗೂ ಪುಟಪಾತ್ ಅತಿಕ್ರಮಣ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದ ಅಂಗಡಿಗಳ ವಿರುದ್ಧ ಇಂದು ಬೆಳ್ಳಂಬೆಳಿಗ್ಗೆ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ಅಧಿಕಾರಿಗಳು ಅತಿಕ್ರಮಣ ತೆರವು ಕಾರ್ಯಚರಣೆ ನಡೆಸಿದರು. ಪೊಲೀಸ್ ಬಿಗಿ ಭದ್ರತೆಯಲ್ಲಿ, ಪಾಲಿಕೆಯ ಜೆಸಿಬಿ ಹಾಗೂ ಪೌರ ಕಾರ್ಮಿಕರನ್ನು ಬಳಸಿಕೊಂಡು ಅಧಿಕಾರಿಗಳು ಅತಿಕ್ರಮಣ ತೆರವು ಕೈಗೊಂಡರು.
ನಗರದ ಸೂಪರ್ ಮಾರುಕಟ್ಟೆಯಲ್ಲಿ ಹಲವು ಬಟ್ಟೆ ಅಂಗಡಿಗಳು ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ತಮ್ಮ ನಿತ್ಯದ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ಸಣ್ಣ ವಾಹನಗಳ ಓಡಾಟಕ್ಕೆ ಸಾಕಷ್ಟು ತೊಂದರೆಯಾಗುತ್ತಿರುವ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಿದ ಪಾಲಿಕೆಯ ಅಧಿಕಾರಿಗಳು ಪೌರ ಕಾರ್ಮಿಕರನ್ನು ಬಳಸಿಕೊಂಡು ಹಲವು ಬಟ್ಟೆ ಅಂಗಡಿಗಳ ಅತಿಕ್ರಮಣ ತೆರವು ಮಾಡಿದರು.

ಪಾಲಿಕೆ ಅಧಿಕಾರಿಗಳ ಹಾಗು ಅಂಗಡಿ ಮಾಲೀಕರ ನಡುವೆ ವಾಗ್ವಾದ
ಪಾಲಿಕೆಯ ಅಧಿಕಾರಿಗಳು ಸೂಪರ್ ಮಾರುಕಟ್ಟೆಯಲ್ಲಿ ಜೆಸಿಬಿ ಬಳಸಿಕೊಂಡು ಅತಿಕ್ರಮಣ ತೆರವಿಗೆ ಮುಂದಾಗುತ್ತಿದ್ದಂತೆ ಸ್ಥಳೀಯ ಅಂಗಡಿ ಮಾಲೀಕರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಕೆಲವು ಅಂಗಡಿ ಮಾಲೀಕರು ನಾವು ರಸ್ತೆ ಅತಿಕ್ರಮಣ ಮಾಡಿಲ್ಲ. ಮಳೆ ನೀರು ಅಂಗಡಿಯ ಒಳಗಡೆ ಬರಬಾರದು ಎಂಬ ಕಾರಣಕ್ಕೆ ತಗಡಿನ ಶೀಟ್ಗಳನ್ನು ಹಾಕಿಕೊಂಡಿದ್ದೇವೆ. ಆದರೆ ಇದನ್ನೇ ಅತಿಕ್ರಮಣ ಅಂದರೆ ಹೇಗೆ ಸಾರ್ ಎಂದು ವಾಗ್ವಾದ ನಡೆಸಿದರು.
ಪಟ್ಟು ಬಿಡದ ಪಾಲಿಕೆಯ ಅಧಿಕಾರಿಗಳು ಅತಿಕ್ರಮಣ ತೆರುವನ್ಮು ಜೆಸಿಬಿ ಬಳಸಿಕೊಂಡು ಮಾಡಲು ಮುಂದಾಗುತ್ತಿದಂತೆ ಎಚ್ಚೆತುಕೊಂಡ ಅಂಗಡಿ ಮಾಲೀಕರು ಸ್ವತಃ ನಾವೇ ತೆರವು ಮಾಡಿಕೊಳ್ಳುವುದಾಗಿ ಪಾಲಿಕೆಯ ಅಧಿಕಾರಿಗಳಿಗೆ ಸಮಯವಕಾಶ ಕೇಳಿಕೊಂಡರು. ಈ ಹಿನ್ನೆಲೆಯಲ್ಲಿ ಸಮಯ ನೀಡಿದ ಪಾಲಿಕೆ ಅಧಿಕಾರಿಗಳು ಒಂದು ದಿನ ಅವಕಾಶ ನೀಡಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.
