ರಾಜ್ಯ ಸರ್ಕಾರದಲ್ಲಿ ಅತಿಯಾಗಿದೆ ಕಮಿಷನ್ ವ್ಯವಹಾರ: ಹೆಚ್ ಡಿ ಕೆ ಆರೋಪ

ಬೆಂಗಳೂರು : ಗುತ್ತಿಗೆದಾರರು ಮೊದಲು ಪರ್ಸಂಟೇಜ್ ಕೊಡುವುದನ್ನು ನಿಲ್ಲಿಸಿದರೆ ಕಮಿಷನ್ ಪ್ರಕರಣಗಳು ನಿಲ್ಲುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಲಂಚ ಬೇಡಿಕೆ ಆರೋಪಕ್ಕೆ ಸಂಬಂಧಿಸಿ ಬೆಳಗಾವಿಯ ಗುತ್ತಿಗೆದಾರೊಬ್ಬರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್ ಡಿ ಕೆ ರಾಜ್ಯ ಸರ್ಕಾರದಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಪ್ರಚಾರಕ್ಕೆ ಬಂದಿರುವುದೇ ಕಮಿಷನ್ ವಿಚಾರ. ಈಗ ಹೊರಗೆ ಬರುತ್ತಿರುವ ವಿಷಯಗಳ ಬಗ್ಗೆ ಅಚ್ಚರಿ ಏನೂ ಇಲ್ಲ. ಇದು ಒಂದು ರೀತಿಯ ದಿನನಿತ್ಯದ ಕೆಲಸ ಆಗಿಹೋಗಿದೆ.
ಹಿಂದೆ ಸಣ್ಣಪುಟ್ಟ ಮಟ್ಟದಲ್ಲಿ ಇಂಥದ್ದೆಲ್ಲ ನಡೆದುಕೊಂಡು ಹೋಗುತ್ತಿತ್ತು. ಈಗ ಸ್ವಲ್ಪ ದೊಡ್ಡ ಪ್ರಮಾಣಕ್ಕೆ ಏರಿಕೆ ಆಗಿದೆ. ಬಜೆಟ್ ಗಾತ್ರ ಹೆಚ್ಚಾದಂತೆ ಕಮಿಷನ್ ಗಾತ್ರ ಕೂಡ ಹೆಚ್ಚಾಗುತ್ತಿದೆ ಎಂದಿದ್ದಾರೆ.
ಗುತ್ತಿಗೆ ಕೆಲಸ ಮಾಡುವವರು ಇಂಥ ಕೆಲಸಗಳಿಗೆ ಪ್ರೋತ್ಸಾಹ ಕೊಡುವುದನ್ನು ನಿಲ್ಲಸಬೇಕು. ಹಣ, ಕಮಿಷನ್ ಕೊಡುವುದಿಲ್ಲ ಎಂದು ಕಠಿಣ ನಿರ್ಧಾರ ಮಾಡಬೇಕು. ಗುತ್ತಿಗೆದಾರರು ಮೊದಲು ಬಿಗಿಯಾಗಿ ಇದ್ದರೆ ಇಂಥಹ ಸಮಸ್ಯೆಗಳು ಏಕೆ ಬರುತ್ತವೆ ಎಂದು ಪ್ರಶ್ನಿಸಿದ್ದಾರೆ.
