ಕೇವಲ ಕಾಂಗ್ರೆಸ್ಸಿಗರ ಮೇಲೆ ಕೇಸ್ ಹಾಕಿರುವುದೇಕೆ? ಶಿವಕುಮಾರ್ ಪ್ರಶ್ನೆ

ಬೆಂಗಳೂರು: ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವ ಬಿಜೆಪಿ ನಾಯಕರು ಮತ್ತು ಶಾಸಕರ ವಿರುದ್ಧ ಕ್ರಮ ಜರುಗಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಕೋರ್ಟ್ ಮತ್ತು ಜನರ ಆರೋಗ್ಯ ದೃಷ್ಟಿಯಿಂದ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿದ್ದೇವೆ ಮತ್ತೆ ಇದನ್ನು ಪುನರ್ ಆರಂಭಿಸುತ್ತೇವೆ ಎಂದು ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೋರ್ಟ್ ಪಾದಯಾತ್ರೆ ನಿಲ್ಲಿಸಲು ಹೇಳಿಲ್ಲ. ನ್ಯಾಯಾಲಯದ ಭಾವನೆಯನ್ನು ನಾವು ಗೌರವಿಸುತ್ತೇವೆ. ಜನರ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ. ಕೊರೋನಾದಿಂದ ಜಿಲ್ಲೆಯಲ್ಲಿ ಯಾರೂ ಸಾವನಪ್ಪಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಗೆ ಬದ್ಧತೆ ಇರುವ, ಜವಾಬ್ದಾರಿಯುತ ಪಕ್ಷ. ಜನರ ಆರೋಗ್ಯ ದೃಷ್ಟಿಯಿಂದ ಜನರಿಗಾಗಿ ಹೋರಾಟ ವನ್ನು ತಾತ್ಕಾಲಿಕವಾಗಿ ತ್ಯಾಗ ಮಾಡುತ್ತಿದ್ದೇವೆ. ಪಾದಯಾತ್ರೆ ಹಿನ್ನೆಲೆಯಲ್ಲಿ ಸರ್ಕಾರ ನಡೆದುಕೊಂಡ ರೀತಿ ಬಗ್ಗೆ ಸದ್ಯಕ್ಕೆ ಚರ್ಚಿಸಲು ಹೋಗಲ್ಲ ಎಂದರು. ಕೇವಲ ಕಾಂಗ್ರೆಸ್ ನವರ ವಿರುದ್ಧ ಕೇಸ್ ಗಳನ್ನು ಹಾಕಿರುವ ಸರ್ಕಾರದ ನಡೆ ಪ್ರಶ್ನಾರ್ಹ ಎಂದರು.
