ಬಿಜೆಪಿ ಷಡ್ಯಂತ್ರ ಬಯಲಾಗಿದೆ; ಮೈತ್ರಿ ಸರ್ಕಾರದ ಮೇಲಿನ ಗೂಢಚರ್ಯೆಗೆ ಕಾಂಗ್ರೆಸ್ ಕಟುಟೀಕೆ

ನವದೆಹಲಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸುವ ಮೊದಲು ಸರ್ಕಾರದ ಮೇಲೆಯೇ ಗೂಢಚರ್ಯೆ ನಡೆದಿತ್ತು ಎಂಬ ಅಂಶ ಬಯಲಾಗಿರುವ ಬೆನ್ನಲ್ಲೇ, ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸರ್ದೀಪ್ ಸಿಂಗ್ ಸುರ್ಜೇವಾಲಾ, ಕೆ ಸಿ ವೇಣುಗೋಪಾಲ್, ರಾಜ್ಯ ನಾಯಕರುಗಳಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಕೆ ಶಿವಕುಮಾರ್ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಜನಮತ ಹೊಂದಿದ್ದ ಸರ್ಕಾರವನ್ನು ಪೆಗಾಸಸ್ ಬಳಸಿಕೊಂಡು ಕೆಡವಿರುವ ಬಿಜೆಪಿ ಅಕ್ರಮವಾಗಿ ಅಧಿಕಾರಕ್ಕೆ ಬಂದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಅಧಿಕಾರ ಹಿಡಿಯಲು ಬಿಜೆಪಿ ಮಾಡಿದ್ದೆಲ್ಲಾ ಒಂದೊಂದಾಗಿ ಇದೀಗ ಬಯಲಾಗುತ್ತಿದೆ. ಬಿಜೆಪಿಯ ಷಡ್ಯಂತ್ರ ಬಯಲಾಗಿದೆ ಎಂದು ಸುರ್ಜೇವಾಲಾ ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿಗೆ ಖುರ್ಚಿಯೇ ಮುಖ್ಯ. ಸಂಚು ರೂಪಿಸಿ ಚುನಾಯಿತ ಸರ್ಕಾರದ ಹತ್ಯೆ ಮಾಡಲಾಗಿದೆ. ಪೆಗಾಸಸ್ ಬಳಸಿಕೊಂಡು ಆಪರೇಷನ್ ಕಮಲ ಮಾಡಿರುವುದು ಈಗ ರಹಸ್ಯವಾಗಿ ಉಳಿದಿಲ್ಲ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.
