ದಾವಣಗೆರೆ ಉತ್ತರ ಕ್ಷೇತ್ರದಿಂದ ಸಿಎಂ ಬೊಮ್ಮಾಯಿ ಕಣಕ್ಕೆ…?

ದಾವಣಗೆರೆ: ಪಂಚ ರಾಜ್ಯ ಫಲಿತಾಂಶ ಬಳಿಕ ಕರ್ನಾಟಕದಲ್ಲಿ ಬಿಜೆಪಿ ತಂತ್ರಗಾರಿಕೆ ಬದಲಾಗಿದೆ. ದಾವಣಗೆರೆ ಉತ್ತರ ಕ್ಷೇತ್ರದಿಂದ ಸಿಎಂ ಬಸವರಾಜ್ ಬೊಮ್ಮಾಯಿ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಳಿಯುವ ಸಾಧ್ಯತೆ ಹೆಚ್ಚಿದೆ.
ಈಗಿನಿಂದಲೇ ಬೆಣ್ಣೆನಗರಿ ಮೇಲೆ ಸಿಎಂ ಕಣ್ಣು ಇಟ್ಟಿದ್ದು, ಒಂದು ವರ್ಷ ಚುನಾವಣೆ ಇರುವಾಗಲೇ ಸಿಎಂ ರಣತಂತ್ರ ರೂಪಿಸಿದ್ದಾರೆ. ಎರಡು ಕಡೇ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ಲಾನ್ ಮಾಡಿದ್ದಾರೆ.
ಶಿಗ್ಗಾಂವಿ ಜೊತೆಗೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಈಗಾಗಲೇ ಬಸವರಾಜ್ ಬೊಮ್ಮಾಯಿ ಕಣಕ್ಕಿಳಿಯುವ ಬಗ್ಗೆ ಸ್ಥಳೀಯ ನಾಯಕರ ಜೊತೆ ಗಂಭೀರ ಚರ್ಚೆ ನಡೆಸಿದ್ದಾರೆ. ದಾವಣಗೆರೆಯಲ್ಲಿ ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಿರುವ ಸಿಎಂ, ಸಂಸದ ಜಿ. ಎಂ. ಸಿದ್ದೇಶ್ವರ್, ಶಾಸಕ ರವೀಂದ್ರನಾಥ್ ಗೆ ಚುನಾವಣೆ ಹೊಣೆ ಹೊರಿಸಲಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಮಾತುಕತೆ ಆಗಿದೆ ಎಂದು ಹಾಲಿ ಬಿಜೆಪಿ ಶಾಸಕ ಎಸ್. ಎ. ರವೀಂದ್ರನಾಥ್ ಹೇಳಿರುವುದು ಇದಕ್ಕೆ ಪುಷ್ಟಿ ಕೊಟ್ಟಿದೆ. ನಮ್ಮ ಕ್ಷೇತ್ರಕ್ಕೆ ಸಿಎಂ ಬಂದ್ರೆ ಗೆಲ್ಲಿಸಿ ಕಳುಹಿಸೋದು ನಮ್ಮ ಕರ್ತವ್ಯ. ಈಗಾಗಲೇ ಸ್ಪರ್ಧೆ ಬಗ್ಗೆ ದಾವಣಗೆರೆ ಸಂಸದರ ಜೊತೆ ಮಾತನಾಡಿದ್ದಾರೆ. ನಾನು ಮುಂದಿನ ಚುನಾವಣೆಗೆ ನಿಲ್ಲೋದಿಲ್ಲ. ಯಾರೇ ಬಂದ್ರೂ ಗೆಲ್ಲಿಸಿ ಕಳುಹಿಸುವ ಜವಾಬ್ದಾರಿ ನಮ್ಮದು. ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಸ್ವಾಗತ ಮಾಡಿದ್ದೇವೆ ಎಂದು ರವೀಂದ್ರನಾಥ್ ತಿಳಿಸಿದ್ದಾರೆ.
