ಪಂಜಾಬ್ ವಿಧಾನಸಭೆ ಚುನಾವಣೆ, ಚರಣ್ ಜಿತ್ ಸಿಂಗ್ (ಚನ್ನಿ) ಕಾಂಗ್ರೆಸ್ ಸಿಎಂ ಅಭ್ಯರ್ಥಿ

ಲುಧಿಯಾನ: ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚರಣ್ ಜಿತ್ ಸಿಂಗ್ ( ಚನ್ನಿ) ಹೆಸರನ್ನು ಪಕ್ಷದ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಪ್ರಸ್ತುತ ಪಂಜಾಬ್ ಸಿಎಂ ಆಗಿರುವ ಮುಖ್ಯಮಂತ್ರಿ ಚನ್ನಿ ಅವರು ಬಡಕುಟುಂಬದಿಂದ ಬಂದವರಾಗಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ನಂತರ ಅವರು ಮತ್ತೆ ಪಂಜಾಬ್ ಸಿಎಂ ಆಗಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟರ್ ಅಮರಿಂದರ್ ಸಿಂಗ್ ಅವರನ್ನು ಸಿಎಂ ಗದ್ದುಗೆಯಿಂದ ಇಳಿಸಿದ ಮೇಲೆ, ಚರಣ್ ಜಿತ್ ಸಿಂಗ್ ಅವರನ್ನು ಕಾಂಗ್ರೆಸ್ ಇತ್ತೀಚೆಗೆಯಷ್ಟೆ ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಿತ್ತು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧುರನ್ನು ಮಾಡಿದ ಮೇಲೆ ಅಮರಿಂದರ್ ಸಿಂಗ್ ಪಕ್ಷದಿಂದ ಅಸಮಾಧಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಿಧು ಬೆಂಬಲಿಗರೇ ಆದ ಚನ್ನಿ ಅವರನ್ನು ಸಿಎಂ ಗಾದಿಗೆ ತರಲಾಗಿತ್ತು. ಇತ್ತೀಚೆಗೆ ಸಿಧು ಮತ್ತು ಚನ್ನಿ ನಡುವೆಯೂ ರಾಜಕೀಯ ವೈಮನಸ್ಯ ಏರ್ಪಟ್ಟಿತ್ತು.
ಈಗ ಮತ್ತೆ ಚನ್ನಿ ಅವರನ್ನು ಪಂಜಾಬ್ ವಿಧಾನಸಭೆ ಚುನಾವಣೆಗೆ ಸಿಎಂ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ದಲಿತ ಸಿಎಂ ಅಭ್ಯರ್ಥಿಗೆ ಕಾಂಗ್ರೆಸ್ ಪ್ರಾಶಸ್ತ್ಯ ನೀಡಿದಂತಾಗಿದೆ. ನವಜೋತ್ ಸಿಂಗ್ ಸಿಧು ಇದನ್ನು ಹೇಗೆ ಅರಗಿಸಿಕೊಳ್ಳುವರು ಎಂಬುದು ಕುತೂಹಲಕಾರಿಯಾಗಿದೆ.
