ಸೆ.13ರಿಂದ 24ರವರೆಗೆ ವಿಧಾನಸಭೆ ಅಧಿವೇಶನ; ರಜೆ ಕೇಳಬೇಡಿ ಎಂದು ಶಾಸಕರಲ್ಲಿ ಸ್ಪೀಕರ್ ಮನವಿ

ಬೆಂಗಳೂರು: ಸೆಪ್ಟೆಂಬರ್ 13ರಿಂದ 24 ರವರೆಗೆ ನಡೆಯಲಿರುವ ವಿಧಾನಸಭೆ ಅಧಿವೇಶನ ವೀಕ್ಷಿಸಲು ಶಾಲಾ ಮಕ್ಕಳ ಹೊರತಾಗಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಬುಧವಾರ ವಧಾನಸೌಧದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, 24ರಂದು ಶುಕ್ರವಾರ ಮಧ್ಯಾಹ್ನ ನಂತರ ಮಾತ್ರ ಜಂಟಿ ಅಧಿವೇಶನ ನಡೆಸಲಾಗುವುದು. ಜಂಟಿ ಅಧಿವೇಶನದಲ್ಲಿ ಸಂಸದೀಯ ಮೌಲ್ಯಗಳ ಬಗ್ಗೆ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ. ಜಂಟಿ ಅಧಿವೇಶನಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದರು.
ಆರು ತಿಂಗಳ ಹಿಂದೆ ನಡೆದ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಅಧಿವೇಶನ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರಲಿಲ್ಲ. ಈ ಬಾರಿ ಕೋವಿಡ್ ನಿಯಮಗಳ ಕಡ್ಡಾಯ ಪಾಲನೆಯೊಂದಿಗೆ ಸಾರ್ವಜನಿಕರು ಅಧಿವೇಶನ ವೀಕ್ಷಿಸಬಹುದು ಎಂದು ತಿಳಿಸಿದರು.
ಸದಸ್ಯರ ಕಡ್ಡಾಯ ಹಾಜರಾತಿ:
ಅತ್ಯಂತ ಮಹತ್ವದ ಈ ಅಧಿವೇಶನದಲ್ಲಿ ಕಲಾಪದ ವೇಳೆ ಸದಸ್ಯರು ರಜೆ ಕೇಳಬಾರದು. ಎಲ್ಲರೂ ಕಡ್ಡಾಯವಾಗಿ ಕಲಾಪಕ್ಕೆ ಹಾಜರಾಗಬೇಕು ಕೋರಂ ಕೊರತೆ ಕಾಣಿಸಿಕೊಳ್ಳಬಾರದು ಎಂದು ಮನವಿ ಮಾಡಿದರು.
ಕಲಾಪದ ವೇಳೆ ಯಾವುದೇ ಕಾಣಕ್ಕೂ ಪ್ರಶ್ನೆ ಕೇಳುವವರು ಹಾಗೂ ಉತ್ತರ ಹೇಳುವವರು ಇಲ್ಲ ಎನ್ನುವಂತಹ ಪರಿಸ್ಥಿತಿ ಉಂಟಾಗಬಾರದು. ಕಲಾಪದಲ್ಲಿ
ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು ಹಾಗೂ ಪರಿಹಾರವನ್ನು ಕಂಡುಕೊಳ್ಳಬೇಕು ಎಂದರು.
ಅತ್ಯುತ್ತಮ ಶಾಸಕ ಪ್ರಶಸ್ತಿ:
ಪ್ರಸಕ್ತ ಅಧಿವೇಶನದಲ್ಲಿ ಒಟ್ಟು 18 ವಿಧೇಯಕಗಳು ಮಂಡನೆಯಾಗಲಿವೆ ಎಂದು ತಿಳಿಸಿದ ಸ್ಪೀಕರ್ ಕಾಗೇರಿ, ಅಧಿವೇಶನದ ಕೊನೆಯ ಭಾಗದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ಘೋಷಿಸಲು ತೀರ್ಮಾನಿಸಲಾಗಿದೆ.ಇದಕ್ಕೂ ಮುನ್ನ ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
