ರೈತರ ಪಾಲಿನ ಬಹುದೊಡ್ಡ ಜಯ: ಕೇಂದ್ರದ ಮೂರು ಕೃಷಿ ಕಾಯ್ದೆಗಳು ರದ್ದು; ಪ್ರಧಾನಿ ಘೋಷಣೆ

ನವದೆಹಲಿ: ಕಳೆದೊಂದು ವರ್ಷದಿಂದ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಕೇಂದ್ರದ ಮೂರು ವಿವದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ಘೋಷಿಸಿದ್ದಾರೆ.
ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಈ ಮಹತ್ವದ ಘೋಷಣೆ ಮಾಡಿದ್ದಾರೆ. ವರ್ಷದಿಂದಲೂ ಹಠಕ್ಕೆ ಬಿದ್ದಂತೆ ಸರ್ಕಾರ ಈ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂಬ ರೈತರ ಆಗ್ರಹಕ್ಕೆ ಸ್ಪಂದಿಸಿರಲಿಲ್ಲ. ಇದೀಗ ಪ್ರಧಾನಿಯಿಂದ ಅನಿರೀಕ್ಷಿತವೆನ್ನಿಸುವಂಥ ಈ ಘೊಷಣೆ ಹೊರಬಿದ್ದಿದೆ.
ಪ್ರಮುಖ ರಾಜ್ಯಗಳಲ್ಲಿನ ಚುನಾವಣೆ ಹಿನ್ನೆಲೆಯಲ್ಲಿ ಈ ಘೋಷಣೆ ಹೊರಬಿದ್ದಿರುವ ಹಾಗಿದೆ.
ಅದೇನೇ ಇದ್ದರೂ, ಮೂರೂ ಕೃಷಿ ಕಾಯ್ದೆಗಳನ್ನುಸರ್ಕಾರ ಹಿಂದಕ್ಕೆ ಪಡೆಯುತ್ತಿರುವುದು ವರ್ಷದಿಂದ ಅವುಗಳ ವಿರುದ್ಧ ಯಾವುದನ್ನೂ ಲೆಕ್ಕಿಸದೆ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಪಾಳಿಗೆ ಬಹುದೊಡ್ಡ ಜಯವಾಗಿದೆ.
ಕೃಷಿ ಕಾಯ್ದೆಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವುದು ನಮಗೆ ಸಾಧ್ಯವಾಗಲಿಲ್ಲ. ಬೇರಾರನ್ನೂ ದೂಷಿಸಲಾರೆವು. ಈ ಮೂರೂ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿರುವುದಾಗಿ ಈ ಸಮಧರ್ಭದಲ್ಲಿ ಹೇಳಬಯಸುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು.
ನಾನೇನು ಮಾಡಿದ್ದೆನೊ ಅದು ರೂತರಿಗಾಗಿ ಆಗಿತ್ತು. ನಾನೇನು ಮಾಡುತ್ತೇನೋ ಅದು ದೇಶಕ್ಕಾಗಿ ಎಂದು ಅವರು ಹೇಳಿದರು.
ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ 202ರಿಂದಲೂ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ರೈತರು ದೆಹಲಿ ಹೊರಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ರೈತರ ಪ್ರತಿಭಟನೆ ವಿಚಾರದಲ್ಲಿ ಸರ್ಕಾರ ಇನ್ನೂ ಮೊಂಡು ಹಠ ಮಾಡಿಕೊಂಡು ಕೂತರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಇತ್ತೀಚೆಗೆ ರೈತನಾಯಕ ರಾಕೇಶ್ ಟಿಕಾಯತ್ ಎರಡೆರಡು ಬಾರಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದರು.
