ಮೇಕೆದಾಟು ನಂತರ ಮಹಾದಾಯಿ ಪಾದಯಾತ್ರೆ: ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಮಾತ್ರವಲ್ಲ ಮಹದಾಯಿ ನೀರಿಗಾಗಿಯೂ ಶೀಘ್ರವೇ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಭಾನುವಾರ ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಸಂಗಮದ ಬಳಿ ಸಿದ್ದರಾಮಯ್ಯ ಈ ವಿಷಯ ತಿಳಿಸಿದರು. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಿಂದಲೂ ಹೋರಾಟಗಳನ್ನು ಮಾಡಿಕೊಂಡೇ ಬಂದಿದೆ. ನಮಗೆ ಹೋರಾಟ ಹೊಸದಲ್ಲ, ಮೇಕೆದಾಟು ಯೋಜನೆ ಶೀಘ್ರ ಜಾರಿಯಾಗಬೇಕು. ಕುಡಿಯುವ ನೀರಿನ ಬವಣೆ ನೀಗಬೇಕು ಎಂಬುದು ನಮ್ಮ ನಿಲುವು. ಇದಕ್ಕಾಗಿ ಏನೇ ಅಡೆ ತಡೆ ಎದುರಾದರೂ ಬೆಂಗಳೂರಿನವರೆಗೆ ನಡೆದೇ ನಡೆಯುತ್ತೇವೆ ಎಂದರು.
ಪರಮೇಶ್ವರ್ ಸವಾಲು
ಮಾಜಿ ಸಚಿವ ಡಾ.ಜಿ.ಪರಮೇಶ್ವರ್, 9 ಸಾವಿರ ಕೋಟಿ ರೂ.ವೆಚ್ಚದ ಮೇಕೆದಾಟು ಯೋಜನೆ ಜಾರಿಗೊಳಿಸುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಲಿ.ನಮಗೆ ಈ ಪಾದಯಾತ್ರೆ ಬೇಕಿಲ್ಲ ಎಂದು ಹೇಳಿದರು. ಬಜೆಟ್ ನಲ್ಲಿ ಈ ಕುರಿತು ಘೋಷಿಸುತ್ತೇವೆ ಎಂದು ಹೇಳಿದರೂ ಸಾಕು ಎಂದು ಅವರು ಸವಾಲು ಹಾಕಿದರು.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಪಕ್ಷಕ್ಕಾಗಿ ಸಭೆ ಮಾಡಿಕೊಂಡು ತಿರುಗುತ್ತಿದ್ದಾರೆ.ಆದರೆ ನಾವು ರಾಜ್ಯದ ಹಿತರಕ್ಷಿಸಲು ಪಾದಯಾತ್ರೆ ಮಾಡುತ್ತಿದ್ದೇವೆ. ಸ್ವಂತಕ್ಕೆ ಅವರು ಮಾಡುವುದು ನ್ಯಾಯ.ರಾಜ್ಯದ ಜನರಿಗಾಗಿ ನಾವು ಮಾಡುವುದು ಅನ್ಯಾಯವೇ? ಎಂದು ಪರಮೇಶ್ವರ್ ಪ್ರಶ್ನಿಸಿದರು.
ಪಾದಯಾತ್ರೆ ತಡೆಯದಿರಲು ನಿರ್ಧಾರ
ಈ ನಡುವೆ, ಕಾಂಗ್ರೆಸ್ ಪಾದಯಾತ್ರೆ ತಡೆಯದಿರಲು ಸರ್ಕಾರದ ನಿರ್ಧಾರಿಸಿದೆ. ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಕೊರೋನಾ ನಿಯಮಾವಳಿಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಲು ಸಭೆ ನಿರ್ಧರಿಸಿದೆ.
