ನನ್ನನ್ನು ಮೋದಿ ಚಮಚ ಎಂದರೂ ನಾನು ಕೇರ್ ಮಾಡಲ್ಲ: ಪ್ರಕಾಶ್ ಬೆಳವಾಡಿ

ಪ್ರಧಾನಿ ನರೇಂದ್ರ ಮೋದಿಯವರು ಒಳ್ಳೆಯ ಕೆಲಸ ಮಾಡಿದಾಗ ನಾನು ಅವರನ್ನು ಬೆಂಬಲಿಸಿರುವುದು ನಿಜ. ಹಾಗಾಗಿ, ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾ ಬಂದ ಬಳಿಕವೂ ನನ್ನನ್ನು ಮೋದಿ ಚಮಚಾ ಎನ್ನುತ್ತಿದ್ದಾರೆ. ಇದಕ್ಕೆ ನಾನು ಕೇರ್ ಮಾಡುವುದಿಲ್ಲ ಎಂದು ನಟ ಕಂ ನಿರ್ದೇಶಕ ಪ್ರಕಾಶ್ ಬೆಳವಾಡಿ ತಿಳಿಸಿದ್ದಾರೆ.
ಮೈಸೂರಿನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆ ಬಳಿಕ ಮಾತನಾಡಿದ ಅವರು, ಮೋದಿ ಸರಕಾರ ಆಡಳಿತದಲ್ಲಿ ಇಲ್ಲದೇ ಹೋಗಿದ್ದರೆ ಈ ಸಿನಿಮಾ ಬಿಡುಗಡೆ ಆಗುತ್ತಲೇ ಇರಲಿಲ್ಲ. ಕೆಲವರು ಈ ಸಿನಿಮಾ ಪ್ರಚಾರಕ್ಕೆ ಬಳಕೆಯಾಗುತ್ತಿದೆ ಎಂದೆಲ್ಲಾ ಟೀಕಿಸುತ್ತಿದ್ದಾರೆ. ನನ್ನ ಪ್ರಕಾರ ಈ ಸಿನಿಮಾ ಸತ್ಯವೊಂದರ ಪ್ರಚಾರ. ಇದು ಪಕ್ಷಪಾತಿಯೂ ಹೌದು. ಆದರೆ ಇದರ ಉದ್ದೇಶ ಸತ್ಯಶೋಧನೆ. ಇದೇ ಘಟನೆ ಕುರಿತು ಬೇರೆ ಥರ ಸತ್ಯ ಇದ್ದರೆ, ನೀವು ಸಿನಿಮಾ ಮಾಡಿ,” ಎಂದು ಪ್ರಕಾಶ್ ಬೆಳವಾಡಿ ಹೇಳಿದರು.
”90ರ ದಶಕದಲ್ಲಿ ಅತಿ ಕಡಿಮೆ ಎಂದರೂ 60 ಸಾವಿರ ಪಂಡಿತರ ಕುಟುಂಬಗಳು ದೌರ್ಜನ್ಯ ತಾಳಲಾರದೆ ಕಾಶ್ಮೀರ ತೊರೆದವು. ಒಂದೊಂದು ಮನೆಯಲ್ಲೂ ಐದಾರು ಜನ ಎಂದಿಟ್ಟುಕೊಂಡರೂ, ಎಷ್ಟೊಂದು ಜನ ತಮ್ಮದೇ ನೆಲದಲ್ಲಿ ಪರಕೀಯರಾಗಿ, ನಿರಾಶ್ರಿತರಾದರು,” ಎಂದರು.
