ಕಬಿನಿಯಿಂದ 30 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

ಮೈಸೂರು: ಕೇರಳದ ವೈನಾಡಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶದಿಂದ 30 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ.
ಹೆಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ. 30 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದ್ದು, ಜಲಾಶಯದ ಮುಂಭಾಗವಿರುವ ಸೂಳೆಕಟ್ಟೆ ಸೇತುವೆ ಕೂಡ ಸಂಪೂರ್ಣ ಮುಳುಗಡೆಯಾಗಿದೆ.
ಕಬಿನ ಒಳಹರಿವಿನಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದ್ದು, 23129 ಕ್ಯೂಸೆಕ್ ನೀರು ಒಳಹರಿವು ಇದ್ದು, 2281.10 ಅಡಿಗಳಿಗೆ ನೀರಿನ ಮಟ್ಟ ಏರಿಕೆಯಾಗಿದೆ. 17.36 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಪಿಲ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಒಳ ಹರಿವು ಹೆಚ್ಚಾದಂತೆಲ್ಲ ಹೊರಹರಿವು ಏರಿಕೆ ಸಾಧ್ಯತೆ ಇದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಲವುಕಡೆ ರೈತರ ಜಮೀನುಗಳು ಮುಳುಗಡೆಯಾಗಿದೆ.
ನಿನ್ನೆ ಸಂಜೆ ಕಬಿನಿ ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಿದ ಕಾರಣ ಜಲಾಶಯದ ಮುಂಭಾಗದಲ್ಲಿರುವ ಸೂಳೆಕಟ್ಟೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಇದರಿಂದ ಹ್ಯಾಮಡ್ ಪೆÇೀಸ್ಟ್ ನಿಂದ ಬೇಗೂರು ಮಾರ್ಗದ (ಬಿದರಹಳ್ಳಿ, ತೆರಣಿಮುಂಟಿ, ಕಂದೇಗಾಲ, ಮೊಸರಹಳ್ಳ, ಬಸಾಪುರ, ಕಳಸೂರು, ಕೆಂಚನಹಳ್ಳಿ, ಮೂರ್ ಬಂದ್,ಭೀಮನಕೊಲ್ಲಿ, ಎನ್.ಬೇಗೂರು, ಜಕ್ಕಳ್ಳಿ, ಬೀರಂಬಳ್ಳಿ, ಗೆಂಡತ್ತೂರು) ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
