ತುಂಗಾಭದ್ರಾರತಿಗೆ 30 ಕೋಟಿ, ಪ್ರವಾಸಿ ತಾಣವಾಗಿ ಅಬಿವೃದ್ಧಿ: ಸಿಎಂ
ದಾವಣಗೆರೆ: ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಹರಿಹರ ನಗರದ ತುಂಗಭದ್ರಾ ನದಿ ದಡದಲ್ಲಿ ಸುಮಾರು 3೦ ಕೋಟಿ ರೂಪಾಯಿ ವೆಚ್ಚದಲ್ಲಿ ತುಂಗಭದ್ರಾ ಆರತಿ ‘ ಯೋಜನೆಯ 108 ಯೋಗ ಮಂಟಪಗಳ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಚಾಲನೆ ನೀಡಿದರು.
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಶಂಕುಸ್ಥಾಪನೆ ನೆರವೇರಿತು. ಉತ್ತರ ಭಾರತದ ಕಾಶಿಯ ಗಂಗಾರತಿ ಮಾದರಿಯಲ್ಲಿ ಹರಿಹರದಲ್ಲಿಯೂ ಕೂಡ ತುಂಗಭದ್ರಾ ಆರತಿ ನೆರವೇರಲಿದೆ.
ನದಿ ತೀರದಲ್ಲಿ ಮಂಟಪಗಳನ್ನು ನಿರ್ಮಾಣ ಮಾಡುವ ಮೂಲಕ ಯಾತ್ರಾ ಸ್ಥಳವಾಗಿ ಹರಿಹರ ಕ್ಷೇತ್ರ ರೂಪುಗೊಳ್ಳಲಿದೆ.ಇದಲ್ಲದೇ ಪ್ರವಾಸೋದ್ಯಮ ಕೂಡ ಬೆಳೆದು ಉದ್ಯೋಗವಕಾಶಗಳೂ ಸೃಷ್ಟಿಯಾಗಲಿದೆ.ಹರಿಹರ ಕ್ಷೇತ್ರ ಪುರಾಣ ಪ್ರಸಿದ್ಧ ಹರಿಹರೇಶ್ವರ ದೇವಾಲಯದಿಂದ ನಾಡಿನಾದ್ಯಂತ ಹೆಸರಾಗಿದೆ. ಇದೀಗ ಕಾಶಿಯ ಗಂಗಾರತಿ ಮಾದರಿಯ ತುಂಗಾರತಿ ಮೂಲಕ ಮತ್ತಷ್ಟು ಆಕರ್ಷಕ ಕೇಂದ್ರವಾಗಲಿದೆ.
ಶಂಕುಸ್ಥಾಪನೆ ತುಂಗಭದ್ರಾ ನದಿಯ ದಡದಲ್ಲಿ ರಾಘವೇಂದ್ರ ಮಠದ ಪ್ರಧಾನ ಅರ್ಚಕರಾದ ವರಾಹಾಚಾರ್ ನೇತೃತ್ವದಲ್ಲಿ ತುಂಗಾರತಿಯ ಶಂಕುಸ್ಥಾಪನೆ ಜರುಗಿತು. ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಹರಿಹರ ನಗರಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
30 ಕೋಟಿ ಅನುದಾನ: ಸಿಎಂ
ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ವಚನಾನಂದ ಸ್ವಾಮೀಜಿ ಅವರು ತುಂಗಾಭದ್ರಾ ಆರತಿ ನಿರ್ಮಾಣ ಆಗಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 30 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಿದೆ. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು. ಉತ್ತರ ಭಾರತದ ಮಾದರಿಯಲ್ಲಿ ತುಂಗಾಭದ್ರಾ ಆರತಿಯಾಗುತ್ತದೆ. ಈ ಮೂಲಕ ಹರಿಹರ ಒಂದು ಪ್ರವಾಸಿ ತಾಣ ಆಗಲಿದೆ. ಹರಿಹರ ಕ್ಷೇತ್ರದ ಅಭಿವೃದ್ಧಿಗೂ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಹರಿಹರ ಕ್ಷೇತ್ರದ ಸಮಗ್ರ ಅಭಿವೃದ್ಧಿ
ಹರಿಹರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ರಸ್ತೆ, ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ, ಹರಿಹರ ನಗರಕ್ಕೆ ನಗರೋತ್ಥಾನ ಯೋಜನೆಯಡಿ 40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
