ಕೋಳಿ ತ್ಯಾಜ್ಯಕ್ಕಾಗಿ ಕಾಡು ಬಿಟ್ಟ ಚಿರತೆಗಳು; ಜನವಸತಿ ಪ್ರದೇಶದೊಳಕ್ಕೆ ಲಗ್ಗೆ

ರಾಜೇಶ್ ಕೊಂಡಾಪುರ
ರಾಮನಗರ: ಕಾಡಿನಲ್ಲಿ ಇರಬೇಕಾದ ಚಿರತೆಗಳು ಕಾಡಂಚಿನ ಹಳ್ಳಿಗಳತ್ತ ಸುಳಿಯುವುದು ಸರ್ವೇ ಸಾಮಾನ್ಯ ಆದರೆ ಪ್ರಸ್ತುತ ಪಟ್ಟಣಗಳಿಗೂ ನುಗ್ಗುತ್ತಿವೆ.
ಹೌದು, ಇದಕ್ಕೆ ಕಾರಣವಾಗಿರೋದು ಚಿಕನ್ ಸೆಂಟರ್ನಲ್ಲಿ ಉತ್ತತ್ತಿಯಾಗುವ ಕೋಳಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುತ್ತಿರುವುದು. ಇದರ ರುಚಿ ಹತ್ತಿದ ಚಿರತೆಗಳು ಹಳ್ಳಿ ಮತ್ತು ಪಟ್ಟಣಗಳೆನ್ನದೇ ಎಲ್ಲೆಲ್ಲಿಯೂ ಕಾಣಿಸಿಕೊಳ್ಳುತ್ತಿವೆ. ಇದರಿಂದ ಬಂದ ಚಿರತೆಗಳು ಕಾಡಿಗೆ ಮರಳುವುದನ್ನೇ ಮರೆತಿವೆ.
ಕೋಳಿ ತ್ಯಾಜ್ಯವನ್ನು ಗ್ರಾ.ಪಂ.ಗಳು, ನಗರಸಭೆ, ಪುರಸಭೆ ಆಡಳಿತಗಳು ಸಮರ್ಪಕ ವಿಲೇವಾರಿಗೆ ಯಾವುದೇ ಕ್ರಮ ವಹಿಸದೇ ನಿರ್ಲಕ್ಷ್ಯ ವಹಿಸಿದ್ದರಿಂದ ಚಿರತೆಗಳು ಕಾಡು ಬಿಟ್ಟು, ಜನ ವಸತಿ ಪ್ರದೇಶಗಳತ್ತ ದಾಂಗುಡಿ ಇಡುತ್ತಿವೆ.
ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಕೆರೆಕೋಡಿಯ ಬಳಿ ಚಿರತೆಯೊಂದು ಸುಳಿದಾಡುತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕೂಡ್ಲೂರು ಕೆರೆಯ ಸುತ್ತಮುತ್ತ ಚನ್ನಪಟ್ಟಣ ನಗರವು ಸೇರಿದಂತೆ ಮಸಿಗೌಡನ ದೊಡ್ಡಿ, ನೀಲಕಂಠನಹಳ್ಳಿ, ಗೋವಿಂದೇಗೌಡನದೊಡ್ಡಿ, ಚನ್ನಂಕೇಗೌಡನದೊಡ್ಡಿ, ವಾಲೆ ತೋಪು, ಶ್ರೀರಾಮಪುರ ಸೇರಿದಂತೆ ಹಲವಾರು ಗ್ರಾಮಗಳಿದ್ದು ಇಲ್ಲಿನ ಜನತೆ ಆತಂಕಕ್ಕೀಡಾಗಿದ್ದಾರೆ.
ದೇವರಹೊಸಹಳ್ಳಿ ಗ್ರಾಮದ ಸುತ್ತಮುತ್ತ ಕೋಳಿ ಫಾರಂಗಳಿದ್ದು, ಇಲ್ಲಿಗೆ ಕಣ್ವ ಕುರುಲು ಕಾಡಿನಿಂದ ಚಿರತೆಗಳು ಪಟ್ಟಣದ ಹಂಚಿಕೆ ಬರುತ್ತಿವೆ. ಇದಕ್ಕೆ ನಿದರ್ಶನ ಚನ್ನಪಟ್ಟಣ ಎಂ.ಜಿ ರಸ್ತೆಯಲ್ಲಿ ಜುಲೈ 13ರಂದು ಮುಂಜಾನೆ 04 ಗಂಟೆಯ ಸಮಯದಲ್ಲಿ ಚಿರತೆ ಓಡಾಡುವ ಚಿತ್ರವು ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ. ಇದರಿಂದ ನಗರವಾಸಿಗಳು ಆತಂಕಗೊಂಡಿದ್ದಾರೆ.
ಇದರಿಂದಾಗಿ ಜಾನುವಾರುಗಳನ್ನು ಇಂದು ಕೆರೆ ಅಂಗಳ, ತೋಟದ ಹತ್ತಿರ ಮೇಯಲು ಹೊಡೆದುಕೊಂಡು ಹೋಗಲಾಗದ ಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಜಾನುವಾರು ಸಾಕಣೆದಾರರು.
ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅರಣ್ಯ ಇಲಾಖೆ ನಾಡಿಗೆ ಬರುವ ಚಿರತೆಗಳನ್ನು ಸಕಾಲದಲ್ಲಿ ಹಿಡಿದು ದಟ್ಟ ಅರಣ್ಯಕ್ಕೆ ಬಿಡುವಲ್ಲಿ ವಿಫಲವಾಗಿದೆ. ಇದರಿಂದ ಚಿರತೆಗಳ ಜೀವಕ್ಕೂ ಕಂಟಕವಾದಂತಾಗಿದೆ. ಇದಕ್ಕೆ ತಾಜಾ ಉದಾಹರಣೆ ಜುಲೈ15ರಂದು ರಾಮನಗರ ತಾಲೂಕಿನ ಕಾಡನಕುಪ್ಪೆ ಗ್ರಾಮದಲ್ಲಿ ಚಿರತೆಯನ್ನು ಗುಂಡಿಟ್ಟು ಸಾಯಿಸಿರುವುದು.
ಒಟ್ಟಾರೆ, ಸ್ಥಳೀಯ ಸಂಸ್ಥೆಗಳು ಕೋಳಿ ತ್ಯಾಜ್ಯವನ್ನು ಸಮರ್ಪಕ ವಿಲೇವಾರಿ ಮಾಡದ ಕೋಳಿ ಫಾರಂಗಳು ಮತ್ತು ಚಿಕನ್ ಸೆಂಟರ್ಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸದಿರುವುದೇ ನೇರ ಕಾರಣವಾಗಿದೆ.




