ಸಿದ್ದರಾಮಯ್ಯ ರಾಜ್ಯ ಕಂಡ ಮಹಾನ್ ಮೋಸಗಾರ: ನಳಿನ್ ಕುಮಾರ್ ಕಟೀಲ್

ಕಲಬುರ್ಗಿ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಕಂಡ ಮಹಾನ್ ಮೋಸಗಾರ, ವಂಚಕ ಮುಖ್ಯಮಂತ್ರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕುಟುಕಿದ್ದಾರೆ.
ಕಲಬುರ್ಗಿ ಏರ್ಪೋಟ್೯ನಲ್ಲಿ ಮಾತನಾಡಿದ ಅವರು, ಸಿಎಂ ಆಗುವ ಮುನ್ನ ದೊಡ್ಡ ಮಟ್ಟದಲ್ಲಿ ಅಹಿಂದ ಹೋರಾಟ ಮಾಡಿದರು. ಸಿಎಂ ನಂತರ ಅಹಿಂದ ಜನರನ್ನು ನಡುವೆ ಕೈಬಿಟ್ಟರು. ಮತ್ತೆ ಇದೀಗ ಸಿಎಂ ಆಗಲು ಅಹಿಂದ ಮಂತ್ರ ಪಠಿಸುತ್ತಿದ್ದಾರೆ ಎಂದರು. ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯನನ್ನು ಜನ ಓಡಿಸಿದ್ರು, ಈಗ ಬಾದಾಮಿಯಿಂದ ಕ್ಷೇತ್ರದಿಂದಲ್ಲೂ ಓಡಿಸುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮತ್ತೆ ಮೈಸೂರಿನತ್ತ ಮುಖ ಮಾಡಲು ಸಜ್ಜಾಗಿದ್ದಾರೆ ಎಂದು ಟಾಂಗ್ ಕೊಟ್ಟರು.
ಕಾಂಗ್ರೆಸ್ನವರು ಸಿಎಂ ಖುರ್ಚಿಗಾಗಿ ಮ್ಯೂಸಿಕಲ್ ಚೇರ್ ಆಟ.:
ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಗಾಗಿ ಸಂಗೀತ ಕುರ್ಚಿ ಆಟ ನಡೆಯುತ್ತಿದೆ, ಗುಂಪುಗಾರಿಕೆ ಜೋರಾಗಿ ನಡೆಯುತ್ತಿದೆ. ಸಿಎಂ ಕುರ್ಚಿ ಏರಲು ಹಲವರು ಈಗಾಗಲೇ ಟಾವೆಲ್ ಹಾಕಿದ್ದಾರೆ. ಒಂದು ಕಡೆ ಸಿದ್ದರಾಮಯ್ಯ ಸಿಎಂ ಆಗಬೇಕು ಅಂತಿದಾರೆ, ಮತ್ತೊಂದೆಡೆ ಡಿಕೆಶಿ ಸಿಎಂ ಆಗಬೇಕು ಅಂತಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ನಲ್ಲಿ ದಲಿತ ಸಿಎಂ ವಿಷಯ ಜೋರಾಗಿ ಕೇಳಿ ಬರ್ತಿದೆ. ಆದರೆ, ಬಿಜೆಪಿಯಲ್ಲಿ ಮುಂದಿನ ಸಿಎಂ ಕುರಿತಂತೆ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ದೆಹಲಿ ಶಾಸಕರು ಭೇಟಿ..!
ಇದೆ ವೇಳೆ ಸಿಎಂ ಬೆಂಬಲಿಗ ಶಾಸಕರು ದೆಹಲಿ ಭೇಟಿ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವದಲ್ಲಿ ಶಾಸಕರು ದೆಹಲಿ ಸೇರಿದಂತೆ ಎಲ್ಲೆಡೆ ಹೋಗುವ ಅವಕಾಶ ಇದೆ. ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲು ದೆಹಲಿಗೆ ತೆರಳಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವದು ಸರಿಯಲ್ಲ ಅಂತ ಹೇಳಿದರು.
