ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಫೋಟ ಪ್ರಕರಣ; ಭಟ್ಕಳಕ್ಕೆ ಭೇಟಿ ನೀಡಿದ ಎಟಿಎಸ್ ತಂಡ

ಕಾರವಾರ : ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಎ.ಟಿ.ಎಸ್.ತಂಡ (ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್) ಭಟ್ಕಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.
ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ರಿಯಾಜ್ ಭಟ್ಕಳ ಆಗಿದ್ದು,ಆತನ ಸಂಬಂಧಿಕರು ಭಟ್ಕಳದಲ್ಲಿ ಬೇಕರಿ ನಡೆಸುತ್ತಿದ್ದಾರೆಂಬ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು ರಿಯಾಜ್ ಭಟ್ಕಳ ಸಂಬಂಧಿಕರ ಬೇಕರಿ ಹಾಗೂ ಯಾಸಿನ್ ಭಟ್ಕಳ ಮತ್ತು ಇಕ್ಬಾಲ್ ಸಹೋದರರ ಮನೆಗಳಿಗೂ ಕೂಡ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಿಯಾಜ್ ಭಟ್ಕಳ ಮತ್ತು ಇಕ್ಬಾಲ್ ಭಟ್ಕಳ ಸಹೋದರರು ಮುಂಬಯಿಯಲ್ಲೇ ಹುಟ್ಟಿ ಬೆಳೆದರೂ ಅವರ ಕುಟುಂಬದ ಮೂಲ ಭಟ್ಕಳ ಆಗಿರುವುದರಿಂದ ಇವರ ಸಂಬಂಧಿಕರಲ್ಲಿ ಕೆಲವರು ಇಲ್ಲೇ ನೆಲೆಸಿದ್ದಾರೆ.ಈ ಸಂಬಂಧ ರಿಯಾಜ್ ಹಾಗೂ ಇಕ್ಬಾಲ್ ಸಹೋದರರು ಕೆಲಕಾಲ ಭಟ್ಕಳದಲ್ಲಿ ಬಂದು ನೆಲೆಸಿದ್ದರು.
ಮುಂಬಯಿಯಲ್ಲೇ ಹುಟ್ಟಿ ಬೆಳೆದರೂ ಇವರಿಬ್ಬರೂ ಪಾಸ್ಪೋರ್ಟ್ ಬೆಂಗಳೂರಿನಲ್ಲಿ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಒಂದು ರಾಜ್ಯದಲ್ಲಿ ಹುಟ್ಟಿ ಇನ್ನೊಂದು ರಾಜ್ಯದ ಪಾಸ್ ಪೋರ್ಟ್ ಪಡೆದಿದ್ದರೆ ಅದು ಹೇಗೆ ಸಾಧ್ಯ ಎಂಬ ಬಗ್ಗೆ ಕೂಡ ತನಿಖೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ದೊರಕಿದೆ.




