ನೈಟ್ ಕರ್ಫ್ಯೂ: ಸರ್ಕಾರದ ತೀರ್ಮಾನದ ವಿರುದ್ದ ತಿರುಗಿಬಿದ್ದ ಸಿ.ಟಿ. ರವಿ

ಚಿಕ್ಕಮಗಳೂರು : ಕೋವಿಡ್ ಸೋಂಕು ನಿಯಂತ್ರಿಸುವ ನೆಪದಲ್ಲಿ ಸರ್ಕಾರ ಜನರನ್ನು ಭಯ, ಆತಂಕಕ್ಕೆ ನೂಕಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸರ್ಕಾರದ ರಾತ್ರಿ ಕರ್ಫ್ಯೂ ತೀರ್ಮಾನಕ್ಕೆ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ರೂಪಾಂತರ ಒಮಿಕ್ರೋನ್ ಸೋಂಕಿನ ಬಗ್ಗೆ ಆತಂಕ ಬೇಡ ಎಂದು ವೈರಾಣು ತಜ್ಞರು ಹೇಳಿದ್ದಾರೆ. ಮೂಗು ಇರುವ ತನಕ ನೆಗಡಿ ತಪ್ಪಿದ್ದಲ್ಲ, ರಾಜ ಸರ್ಕಾರ ಜನರನ್ನು ಅನಗತ್ಯ ಭಯದ ವಾತಾವರಣಕ್ಕೆ ನೂಕುವುದು ಸಮಂಜಸವಲ್ಲ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಮಂಗಳವಾರದಿಂದ ರಾಜ್ಯಾಧ್ಯಂತ 10 ದಿನಗಳ ಕಾಲ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆ ವರೆಗೆ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ. ಸರ್ಕಾರದ ಈ ತೀರ್ಮಾನಕ್ಕೆ ರಾಜ್ಯಾದಾದ್ಯಂತ ಅಸಮಾಧಾನ ವ್ಯಕ್ತವಾಗಿದೆ.
ಇನ್ನು ಬಿಜೆಪಿ ನಾಯಕರೂ ಆಗಿರುವ ಸಿ.ಟಿ. ರವಿ ಕೂಡಾ, ರಾಜ್ಯ ಸರ್ಕಾರ ಜನರನ್ನ ಅನಗತ್ಯ ಭಯಕ್ಕೆ ಒಳಪಡಿಸಬಾರದು ಎಂದಿದ್ದಾರೆ.
ನಿರ್ಬಂಧ ಖುಷಿ ವಿಷಯವಲ್ಲ
ನಿರ್ಬಂಧ ಹಾಕುವುದು ಖುಷಿ ವಿಚಾರವಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
