ಬೀದಿ ಬದಿ ಅಂಗಡಿಗಳ ದಿಢೀರ್ ತೆರವಿಗೆ ವ್ಯಾಪಾರಸ್ಥರು ಮತ್ತು ಗ್ರಾಮಸ್ಥರ ಖಂಡನೆ

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರ ಆದೇಶದ ಮೇಲೆ ವಿಶ್ವನಾಥಪುರ ಪೋಲೀಸರು ಕಾರ್ಯಚರಣೆ ನಡೆಸಿ ವಿಶ್ವನಾಥಪುರ ಗ್ರಾಮದಲ್ಲಿನ ಬೀದಿ ಬದಿಯ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸಿರುವುದನ್ನು ವಿಶ್ವನಾಥಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಮಾಂಜಿನಪ್ಪ ಖಂಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ಬದಿಯ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳಾವಕಾಶವನ್ನು ಕಲ್ಪಿಸುವುದು ಸ್ಥಳಿಯ ಸಂಸ್ಥೆಗಳ ಜವಾಬ್ದಾರಿ. ಅದನ್ನು ಬಿಟ್ಟು ಅಧಿಕಾರಿಗಳು ಬೀದಿ ಬದಿಯ ಬಡ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸುತ್ತಿರುವುದು ಸರಿಯಲ್ಲ ಬೀದಿ ಬದಿಯ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡದೇ ದಿಢೀರನೇ ಪೋಲೀಸರ ಮೂಲಕ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ದುರುದ್ದೇಷದಿಂದ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ ಎಂದು
ಗ್ರಾಮದ ಮುಖಂಡ ಮುನಿವೆಂಕಟಪ್ಪ ಕಿಡಿಕಾರಿದ್ದಾರೆ.
ಹತ್ತಾರು ವರ್ಷಗಳಿಂದ ಇಲ್ಲಿ ಬಡವರು ಜೀವನ ನಿರ್ವಹಣೆಗಾಗಿ ಬೀದಿ ಬದಿಯಲ್ಲಿ ತರಕಾರಿ, ಇಸ್ತ್ರಿ ಪೆಟ್ಟಿಗೆ ಅಂಗಡಿ, ಕೋಳಿ ಅಂಗಡಿ, ಸೇರಿದಂತೆ ಚಿಕ್ಕ ಪುಟ್ಟ ವ್ಯಾಪಾರ ಮಾಡಿಕೊಂಡಿದ್ದಾರೆ ಇವರಿಂದ ಗ್ರಾಮದಲ್ಲಿ ಯಾರಿಗೂ ತೊಂದರೆ ಉಂಟಾಗಿಲ್ಲ ಎಂದು ಬೀದಿ ಬದಿ ಅಂಗಡಿ ವ್ಯಾಪಾರಸ್ಥರ ಪರವಾಗಿ ವಿಶ್ವನಾಥಪುರ ಗ್ರಾಮಸ್ಥರು ಶನಿವಾರ ವಿಶ್ವನಾಥಪುರ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಜಮಾವಣೆಗೊಂಡು ಅಂಗಡಿಗಳ ದಿಢೀರ್ ತೆರವಿನಿಂದ ವ್ಯಾಪಾರ ಮಾಡಲಾಗದೆ ಕೊಳೆತ ತರಕಾರಿಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿ ಸಂತ್ರಸ್ತರಿಗೆ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.



