ಉತ್ತರ ಕನ್ನಡ: ಅಕಾಲಿಕ ಮಳೆಯಿಂದ 795 ಹೆಕ್ಟೇರ್ ಭತ್ತ ನಾಶ

ಕಾರವಾರ : ಅಕಾಲಿಕ ಮಳೆಯಿಂದಾಗಿ ಕರಾವಳಿ ಜಿಲ್ಲೆಯ ರೈತರಿಗೆ ಸಂಕಷ್ಟ ತಂದೊಡ್ಡಿದೆ.ಕೈಗೆ ಬಂದ ಫಸಲು ಇದೀಗ ನೀರಿನ ಪಾಲಾಗಿದ್ದು,ಲಕ್ಷಾಂತರ ರೂಪಾಯಿ ನಷ್ಟ ತಂದೊಡ್ಡಿದೆ. ಶಿರಸಿ,ಸಿದ್ದಾಪುರ,ಯಲ್ಲಾಪುರ,ಹೊನ್ನಾವರ, ಕುಮಟಾ,ಅಂಕೋಲಾ,ಜೋಯಿಡಾ ಭಾಗದಲ್ಲಿ ಮಳೆಯಿಂದ ರೈತರ ಕೃಷಿ ಜಮೀನುಗಳಿಗೆ ನೀರು ನುಗ್ಗಿ ಫಸಲಿಗೆ ಬಂದ ಭತ್ತ ಸೇರಿದಂತೆ ತೋಟಗಾರಿಕಾ ಉತ್ಪನ್ನಗಳು ನೀರಿನಲ್ಲಿ ಕೊಚ್ಚಿಹೋಗಿದೆ.ಇದರಿಂದಾಗಿ ರೈತರ ಕೈಗೆ ಬಂದ ಫಸಲು ಸಂಪೂರ್ಣ ನಷ್ಟವಾಗಿದ್ದು,ಎಲ್ಲವನ್ನೂ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕಾಲಿಕ ಮಳೆ ಈ ತಿಂಗಳಲ್ಲಿ ಅತೀ ಹೆಚ್ಚು ಕೃಷಿಕರಿಗೆ ನಷ್ಟ ತಂದಿದೆ.ಇದಲ್ಲದೇ ಈ ತಿಂಗಳಲ್ಲಿ ಇಂದು ಅತ್ಯಧಿಕ 348.4 ಮಿಲೀ.ಮೀಟರ್ ಮಳೆಯಾಗಿದ್ದು,ಜಿಲ್ಲೆಯಲ್ಲಿ 795 ಹೆಕ್ಟೇರ್ ಕೃಷಿ ಭೂಮಿಯ ಉತ್ಪನ್ನಗಳು ನಷ್ಟವಾಗಿದೆ.ಇದರಲ್ಲಿ ಭತ್ತದ ಬೆಳೆ 85 ಲಕ್ಷ ರೂ.ಗೂ ಹೆಚ್ಚು ಹಾನಿಯಾಗಿದೆ.
ಇನ್ನು ಅಡಿಕೆ,ಕಾಳುಮೆಣಸು ಇತರೆ ಬೆಳೆಗಳು ಕೋಟಿ ರೂ.ನಷ್ಟ ತಲುಪಿದೆ.ಇನ್ನು ಮಳೆಯ ಅವಾಂತರ ಕೃಷಿಕರನ್ನಷ್ಟೇ ಅಲ್ಲದೇ ನಗರಕ್ಕೂ ಸಂಕಷ್ಟ ತಂದಿದ್ದು, ಕಾರವಾರ ನಗರ,ಗೋಕರ್ಣ ಪಟ್ಟಣದ ಹಲವು ಗಲ್ಲಿಗಳಲ್ಲಿ ನೀರು ತುಂಬಿ ತೊಂದರೆ ಅನುಭವಿಸುವಂತಾಗಿದೆ.ಸದ್ಯ ಜಿಲ್ಲೆಯಲ್ಲಿ ಮಳೆಯ ಅವಾಂತರಗಳು ಪ್ರತಿ ದಿನ ಹೆಚ್ಚುತ್ತಲೇ ಇದೆ.ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾದ್ದರಿಂದ ಇನ್ನೂ ನಾಲ್ಕು ದಿನಗಳ ಕಾಲ ಅಬ್ಬರದ ಮಳೆ ಸುರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ರೈತರು ಬೆಳೆದ ಭತ್ತ ಕಟಾವಿಗೆ ಬಂದಿದ್ದರೆ ಅಡಿಕೆ ತೋಟದಲ್ಲಿ ಕೊನೆಗಳು ಬಲಿತಿವೆ.ಕಾಳುಮೆಣಸು ಕೈಗೆ ಬರಬೇಕಿದೆ.ವರ್ಷವಿಡೀ ಬೆವರು ಸುರಿಸಿ ಹೊಲದಲ್ಲಿ ಬೆಳೆದ ಬೆಳೆ ಅಕಾಲಿಕ ಮಳೆ ಎಲ್ಲವನ್ನೂ ಆಹುತಿ ತೆಗೆದುಕೊಂಡಿದ್ದು,ರೈತರ ವರ್ಷದ ಕೂಳಿಗೆ ಕುತ್ತು ತಂದಿದೆ.




