ದ್ರಾವಿಡ್ಗೆ ಜಯದ ಸ್ವಾಗತ ನೀಡಿದ ರೋಹಿತ್ ಪಡೆ

ಜೈಪುರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 5 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಭಾರತ ತಂಡ ನೂತನ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಜಯದೊಂದಿಗೆ ಸ್ವಾಗತಿಸಿದೆ.
ನಾಯಕ ರೋಹಿತ್ ಶರ್ಮಾ (48) ಮತ್ತು ಸೂರ್ಯಕುಮಾರ್ ಯಾದವ್ (62) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತ 164 ರನ್ ಜಯದ ಗುರಿಯನ್ನು ಎರಡು ಎಸೆತ ಬಾಕಿ ಇರುವಾಗಲೇ ತಲುಪಿತು.
ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಕಂಡಿದೆ.
ಟಾಸ್ ಗೆದ್ದು ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ವಿಶ್ವಕಪ್ ಹೀರೋ ಡೆರಿಲ್ ಮಿಚೆಲ್ ಖಾತೆ ತೆರೆಯದೆ ಪೆವಿಲಿಯನ್ ಸೇರಿದ್ದು ಕಿವೀಸ್ ನ ರನ್ ಗಳಿಕೆಗೆ ಕಡಿವಾಣ ಬಿದ್ದಂತಾಯಿತು. ಆದರೆ ಮಾರ್ಟಿನ್ ಗಪ್ಟಿಲ್ (70) ಹಾಗೂ ಮಾರ್ಕ್ ಚಾಪ್ಮನ್ (63) ಅರ್ಧ ಶತಕ ಸಿಡಿಸುವುದರೊಂದಿಗೆ ನ್ಯೂಜಿಲೆಂಡ್ ಸವಾಲಿನ ಮೊತ್ತ 164 ರನ್ ಗಳಿಸಿತು.
ಭಾರತ ಒಂದು ಹಂತದಲ್ಲಿ ಬೇಗನೆ ಗುರಿ ತಲಪುವ ಲಕ್ಷಣ ತೋರಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕಿವೀಸ್ ಉತ್ತಮ ರೀತಿಯಲ್ಲಿ ಬೌಲಿಂಗ್ ಪ್ರದರ್ಶಿಸಿ ಪಂದ್ಯ ಕೊನೆಯ ಓವರ್ ವರೆಗೂ ಸಾಗಿ ಬಂತು.
40 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿ 62 ರನ್ ಸಿಡಿಸಿದ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
