ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ಪ್ರಕರಣ: ಡಿಸಿ ವಿರುದ್ದ ಗಂಭೀರ ಆರೋಪ ಮಾಡಿದ ಶಾಸಕ ಹರ್ಷವರ್ಧನ್

ಮೈಸೂರು : ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಇದೀಗ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ನಂಜನಗೂಡು ಶಾಸಕ ಹರ್ಷವರ್ಧನ್ ಗಂಭೀರ ಆರೋಪ ಮಾಡಿದ್ದಾರೆ.
ಹುಚ್ಚಗಣಿ ಮಹದೇವಮ್ಮ ದೇಗುಲ ತೆರವು ಮಾಡಲು ಜಿಲ್ಲಾಧಿಕಾರಿಯೇ ಆದೇಶ ಮಾಡಿದ್ದರು ಎಂದು ಶಾಸಕ ಹರ್ಷವರ್ಧನ್ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಹುಚ್ಚಗಣಿ ದೇವಾಲಯ ತೆರವು ಮಾಡಲು ಡಿಸಿಯಿಂದಲೇ ಆರ್ಡರ್ ಆಗಿತ್ತು. ಆದರೆ ದೇವಸ್ಥಾನ ಬೀಳಿಸುವುದು ಬೇಡವೆಂದು ಅದನ್ನು ಉಳಿಸಿಕೊಳ್ಳಲು ತಮ್ಮ ಮೇಲಾಧಿಕಾರಿಯಾದ ಮೈಸೂರು ಡಿಸಿಗೆ, ತಹಶೀಲ್ದಾರ್ ವರದಿ ಕೊಟ್ಟಿದ್ದರು.
ಆದರೆ ಜಿಲ್ಲಾಧಿಕಾರಿ ಯಾವ ಆಧಾರದ ಮೇಲೆ ದೇವಸ್ಥಾನ ಉಳಿಸುತ್ತಿರಾ? ಎಂದು ಪ್ರಶ್ನಿಸಿದ್ದರು. ಆಗ ಜಿಲ್ಲಾಧಿಕಾರಿಯ ಈ ದಿಢೀರ್ ಪ್ರಶ್ನೆಗೆ ತಹಶೀಲ್ದಾರ್ ಬಳಿ ಉತ್ತರ ಇರಲಿಲ್ಲ. ಎಲ್ಲಾ ಕಡೆ ದೇವಸ್ಥಾನ ತೆರವು ಮಾಡಿದ್ದೀವಿ. ಮಹದೇವಮ್ಮ ದೇವಸ್ಥಾನಕ್ಕೂ ಸಂಬಂಧಿಸಿದ ಯಾವುದೇ ದಾಖಲಾತಿ ಇಲ್ಲ. ಆದ್ದರಿಂದ ದೇವಸ್ಥಾನ ತೆರವು ಮಾಡಬೇಕೆಂದು ಡಿಸಿ ಆದೇಶ ಮಾಡಿದ್ದಾರೆ ಎಂದು ಹರ್ಷವರ್ಧನ್ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲದೆ ತಹಶೀಲ್ದಾರ್ ವರ್ಗಾವಣೆ ಮಾಡಿದ್ದಕ್ಕೆ ಬೇಸರವಿದೆ, ಈ ಸಂಬಂಧ ಸಿಎಂ ಜತೆ ಮಾತನಾಡುತ್ತೇನೆ ಎಂದು ಶಾಸಕ ಹರ್ಷವರ್ಧನ್ ತಿಳಿಸಿದ್ದಾರೆ.



