ಉತ್ತರ ಕನ್ನಡ: 459 ಅಕ್ರಮ ದೇವಸ್ಥಾನಗಳ ಕೆಡವಲು ತಯಾರಿ

ಕಾರವಾರ : 2013 ರ ಸುಪ್ರೀಂಕೋರ್ಟ್ ತೀರ್ಪಿನಂತೆ ಸರ್ಕಾರಿ ಜಾಗ,ಸಾರ್ವಜನಿಕ ರಸ್ತೆ,ಅರಣ್ಯ ಭೂಮಿಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾದ ದೇವಸ್ಥಾನಗಳ ಕಟ್ಟಡಗಳನ್ನು ತೆರವುಗೊಳಿಸಲು ಮೈಸೂರಿನಲ್ಲಿ ಈಗಾಗಲೇ ಕಾನೂನು ಜಾರಿ ಮಾಡಲಾಗಿದೆ.ಇದರ ಬೆನ್ನಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣವಾದ ದೇವಸ್ಥಾನಗಳ ಪಟ್ಟಿಗಳು ಸಹ ಸಿದ್ದವಾಗಿದೆ.
ಇದರಂತೆ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ 1973 ದೇವಸ್ಥಾನಗಳು ಇದ್ದು,ಇದರಲ್ಲಿ ಕಾನೂನಿನ ಪ್ರಕಾರ ಹಾಗೂ ಮುಜರಾಯಿ ಇಲಾಖೆಯಿಂದ ಅನುಮೋದನೆಗೊಂಡ 1514 ದೇವಸ್ಥಾನಗಳು ಸಕ್ರಮವಾಗಿದ್ದರೆ,459 ದೇವಸ್ಥಾನಗಳು ಕಾನೂನು ಬಾಹಿರವಾಗಿದೆ.ಇದರಲ್ಲಿ 2009 ರಲ್ಲಿ ನಿರ್ಮಾಣವಾದ ದೇವಸ್ಥಾನಗಳು ಹೆಚ್ಚಿವೆ ಎಂದು ತಿಳಿದು ಬಂದಿದೆ.
ಜಿಲ್ಲೆಯ ಯಾವ ತಾಲೂಕಿನಲ್ಲಿ ಎಷ್ಟು ಕಾನೂನು ಬಾಹಿರ ದೇವಸ್ಥಾನಗಳಿವೆ ?
ದಾಂಡೇಲಿ 137, ಕುಮಟಾ 6, ಹೊನ್ನಾವರ 6, ಭಟ್ಕಳ 1, ಶಿರಸಿ 75, ಸಿದ್ದಾಪುರ 29, ಯಲ್ಲಾಪುರದಲ್ಲಿ 205 ದೇವಾಲಯಗಳನ್ನು ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ.
ಕಂಟಕ ಇರುವ ದೇವಸ್ಥಾನಗಳು
ಶಿರಸಿ, ಸಿದ್ದಾಪುರ,ಯಲ್ಲಾಪುರದಲ್ಲಿ ತಲಾ ಐದು ದೇವಸ್ಥಾನಗಳು ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗಿದ್ದರೆ, ಭಟ್ಕಳದಲ್ಲಿ 1, ಶಿರಸಿ 68, ಸಿದ್ದಾಪುರ 11, ಯಲ್ಲಾಪುರ 115, ಹೊನ್ನಾವರ 6, ಕುಮಟಾದಲ್ಲಿ ಮೂರು ಧಾರ್ಮಿಕ ಕೇಂದ್ರಗಳನ್ನು ಅರಣ್ಯ ಭೂಮಿಯಲ್ಲಿ ನಿರ್ಮಿಸಲಾಗಿದೆ.
ಶಿರಸಿ 1, ಕುಮಟಾ 1, ಸಿದ್ದಾಪುರ 13, ಯಲ್ಲಾಪುರ 39 ದೇವಸ್ಥಾನಗಳು ಗಾಂವಠಾಣಾ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದೆ. ದಾಂಡೇಲಿ 137, ಭಟ್ಕಳ 1, ಶಿರಸಿ 1 ಸ್ಥಳೀಯ ಸಂಸ್ಥೆಗಳ ಜಾಗದಲ್ಲಿ ನಿರ್ಮಾಣವಾಗಿದೆ.
2009ರ ನಂತರ ನಿರ್ಮಾಣವಾದ ಅನಧಿಕೃತ ಹಾಗೂ ಕಾನೂನು ಬಾಹಿರ ಇರುವ ದೇವಸ್ಥಾನವನ್ನು ಕೆಡವಲು ಹಾಗೂ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಅದರಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಮಿಟಿ ಸಹ ಇದ್ದು, ಇದರಲ್ಲಿ ಮುಜರಾಯಿ, ಕಂದಾಯ, ಅರಣ್ಯ, ಪೊಲೀಸ್ ಇಲಾಖೆ ಒಳಗೊಂಡ ಈ ಕಮೀಟಿ ಈಗಾಗಲೇ ಸಭೆ ನಡೆಸಿದ್ದು, ಶೀಘ್ರದಲ್ಲಿ ನಿರ್ಧಾರ ಪ್ರಕಟಿಸಲಿದೆ.
ಮೂಲಗಳ ಮಾಹಿತಿ ಪ್ರಕಾರ ದಾಂಡೇಲಿ ಭಾಗದಲ್ಲಿ ಇರುವ ಅನಧಿಕೃತ ನಿರ್ಮಾಣದ ದೇವಸ್ಥಾನವನ್ನು ಕೆಡವಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.
ಜೊತೆಗೆ ಜಿಲ್ಲೆಯ ಶಿರಸಿ ಭಾಗ ಸೇರಿದಂತೆ ಇತರೆ ತಾಲೂಕು ಭಾಗದ ದೇವಸ್ಥಾನಗಳ ಪಟ್ಟಿ ಸಹ ಸಿದ್ದವಿದ್ದು, ಜಿಲ್ಲಾಧಿಕಾರಿಗಳ ಅನುಮತಿಗಾಗಿ ಕಾಯಲಾಗುತ್ತಿದೆ. ಆದರೆ ಜಿಲ್ಲಾಧಿಕಾರಿಗಳು ಸಾಧಕ ಭಾದಕಗಳ ಬಗ್ಗೆ ಅಧ್ಯಯನ ಮಾಡಿದ್ದು, ಆದೇಶ ನೀಡಿಲ್ಲ. ಆದರೂ ಮೈಸೂರಿನಲ್ಲಿ ಅನಧಿಕೃತ ದೇವಸ್ಥಾನ ಕೆಡವಿದಂತೆ ಇಲ್ಲಿಯೂ ಶೀಘ್ರದಲ್ಲಿ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.




