ಧಾರವಾಡದಲ್ಲಿ ಮತ್ತೆ ಸಕ್ರಿಯವಾದ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ: ಹೋರಾಟಕ್ಕೆ ಧ್ವನಿಗೂಡಿಸಿ ಶಾಸಕ ಬೆಲ್ಲದ್

ವಿಶೇಷ ವರದಿ : ಮಂಜುನಾಥ್ ಡಿ
ಧಾರವಾಡ : ಹುಬ್ಬಳ್ಳಿ – ಧಾರವಾಡ ಮಾಹಾನಗರ ಪಾಲಿಕೆ ಚುನಾವಣೆಯ ಅಖಾಡ ಈಗ ದಿನ ಕಳೆದಂತೆ ರಂಗು ಪಡೆದುಕೊಳ್ಳುತ್ತಿದೆ. ಈಗಾಗಲೇ ಎರಡು ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಚುನಾವಣೆಯ ಕಣಕ್ಕೆ ಇಳಿಸಿ ಬಿರುಸಿನ ಪ್ರಚಾರ ನಡೆಸುತ್ತಿವೆ. ಆದರೆ ಪಾಲಿಕೆಯ ಚುನಾವಣೆ ಮಧ್ಯದಲ್ಲೀಗ, ಧಾರವಾಡ ನಗರಕ್ಕೆ ಪ್ರತ್ಯೇಕ ಪಾಲಿಕೆಯ ಕೂಗು ಜೋರಾಗಿ ಕೇಳಿ ಬರುತ್ತಿದೆ. ಚುನಾವಣೆಯ ಅಭ್ಯರ್ಥಿಗಳ ಪ್ರಚಾರದ ನಡುವೆಯು ಪ್ರತೇಕ ಪಾಲಿಕೆ ಹೋರಾಟ ಸಮಿತಿಯು ನಗರದ ಜನತೆಯನ್ನು ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ.
ಹು-ಧಾ ಮಹಾ ನಗರಗಳು ರಾಜ್ಯ ರಾಜ್ಯಧಾನಿ ಬೆಂಗಳೂರಿನ ನಂತರ ಅತೀವೇಗವಾಗಿ ಬೆಳೆಯುತ್ತಿರುವ ನಗರಗಳಾಗಿದ್ದು, ಆದರೆ ಪಾಲಿಕೆ ರಚನೆಯಾದಾಗಿನಿಂದಲೂ ಧಾರವಾಡ ವಿಷಯದಲ್ಲಿ ಪಾಲಿಕೆಯ ಆಡಳಿತ ನಿರ್ಲಕ್ಷ್ಯ ತೋರುತ್ತಲ್ಲೇ ಬಂದಿದೆ ಎಂಬುವುದು ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯ ಗಂಭೀರ ಆರೋಪವಾಗಿದೆ. ಈ ವಿಚಾರ ಕುರಿತು ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯೂ ಸಹ ಹುಟ್ಟಿಕೊಂಡಿದ್ದು, ಹಲವು ಬಾರಿ ಪ್ರತಿಭಟನೆ, ಮನವಿ ಸಲ್ಲಿಕೆಯಂತಹ ಪ್ರಯತ್ನಗಳು ಮಾಡಿಕೊಂಡು ಬರುತ್ತಲೇ ಬಂದಿದೆ. ಪ್ರಸ್ತುತ ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಬೇಡಿಕೆಗೆ ಮತ್ತಷ್ಟು ಬಲ ಬಂದಂತಾಗಿದ್ದು, ಸಮಿತಿಯ ಸದಸ್ಯರು ಸೇರಿದಂತೆ ಮತದಾರರು ಕೂಡಾ ಅಭ್ಯರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
ಪ್ರತ್ಯೇಕ ಪಾಲಿಕೆ ಕೂಗು ಆರಂಭವಾಗಲು ಕಾರಣಗಳು:
ಹು-ಧಾ ಮಹಾನಗರ ಪಾಲಿಕೆ ಎಲ್ಲ ದೃಷ್ಟಿಯಿಂದಲೂ ಧಾರವಾಡ ನಗರವನ್ನು ಕಡೆಗಣಿಸುತ್ತಿರುವ ಕಾರಣ ಪ್ರತ್ಯೇಕ ಪಾಲಿಕೆಯ ಕೂಗು ಇತ್ತೀಚೆಗೆ ಕೇಳಿ ಬರುತ್ತಿದೆ. ಪಾಲಿಕೆಯ ಸಾಮಾನ್ಯ ಸಭೆ ಸೇರಿದಂತೆ ಪ್ರಮುಖ ಸಭೆ-ಸಮಾರಂಭ, ನಿರ್ಣಯಗಳೆಲ್ಲವೂ ಹುಬ್ಬಳ್ಳಿಯಲ್ಲಿಯೇ ನಡೆಯುತ್ತವೆ. ಧಾರವಾಡದಲ್ಲಿ ಪಾಲಿಕೆ ಕಚೇರಿ ಇದ್ದರೂ ಸಹ ಹೆಸರಿಗೆ ಮಾತ್ರೆ ಎನ್ನವಂತಾಗಿದೆ. ಹುಬ್ಬಳ್ಳಿಯಂತೆಯೇ ಧಾರವಾಡದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರವಾಗುತ್ತಿದೆ. ತೆರಿಗೆ ಸೇರಿದಂತೆ ಪಾಲಿಕೆಯ ಅನುದಾನ ಮಾತ್ರ ಸರಿಯಾದ ಪ್ರಮಾಣದಲ್ಲಿ ಧಾರವಾಡಕ್ಕೆ ಹಂಚಿಕೆಯಾಗುತ್ತಿಲ್ಲ. ಸ್ಮಾರ್ಟ್ ಸಿಟಿ, ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣ, ಮೇಲ್ಸೇತುವೆ ಅಂತಹ ಪ್ರಮುಖ ಯೋಜನೆಗಳು ಹುಬ್ಬಳ್ಳಿಗೆ ಮಾತ್ರ ಸೀಮಿತವಾಗಿವೆ. ಜತೆಗೆ ಪಾಲಿಕೆ ಸದಸ್ಯರ ಪೈಕಿ ಹುಬ್ಬಳ್ಳಿಯವರೇ ಅತೀ ಹೆಚ್ಚಿನ ಬಾರಿ ಮೇಯರ್ ಆಗಿದ್ದು, ಅಧಿಕಾರ ಹುಬ್ಬಳ್ಳಿಯಲ್ಲಿ ಇರುವ ಕಾರಣ ಧಾರವಾಡ ಜನತೆ ಇಂತಹ ಮಲತಾಯಿ ಧೋರಣೆ ನೋವು ಕಾಡಲಾಂಭಿಸಿದೆ. ಇದರಿಂದ ಬೇಸತ್ತಿರುವ ಧಾರವಾಡ ನಗರ ಜನತೆ ನಮ್ಮ ನಗರ ಅಭಿವೃದ್ಧಿಗಾಗಿ ಪ್ರತ್ಯೇಕ ಪಾಲಿಕೆಯ ಅವಶ್ಯ ಎನ್ನುವಂತಾಗಿದೆ.

ಮತ್ತೆ ಸಕ್ರಿಯ ಆಗಿದೆ ಪಾಲಿಕೆ ಪ್ರತ್ಯೇಕ ಹೋರಾಟ ಸಮಿತಿ:
ಹುಬ್ಬಳ್ಳಿ-ಧಾರವಾಡ ಅವಳಿನಗರ ಚುನಾವಣೆಯ ಮತದಾನ ಸಮಿಪೀಸುತ್ತಿದ್ದು, ಅಭ್ಯರ್ಥಿಗಳು ಭರ್ಜರಿ ಮತಯಾಚಣೆ ಮಾಡುತ್ತಿದ್ದಾರೆ. ಇವರ ನಡುವೆ ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯ ಸದಸ್ಯರು ಕೂಡಾ ಈಗ ಧಾರವಾಡ ನಗರಗಳಲ್ಲಿ ಸಂಚರಿಸಿ ಪ್ರತ್ಯೇಕ ಪಾಲಿಕೆಯ ಕರ ಪತ್ರಗಳನ್ನು ಹಂಚುತ್ತಿದ್ದಾರೆ. ಜೊತೆಗೆ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಮೇಲೆಯು ಸಮಿತಿ ಸದಸ್ಯರು ಒತ್ತಡ ಹೇರುತ್ತಿದ್ದಾರೆ. ಪ್ರಮುಖವಾಗಿ ಬಿಜೆಪಿ ಪಕ್ಷದ ಪಾಲಿಕೆ ಅಭ್ಯರ್ಥಿಗಳ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರತ್ಯೇಕ ಪಾಲಿಕೆಯಯನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಾಯ ಕೂಡಾ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಚುನಾವಣೆ ಕಣದಲ್ಲಿ ಇರುವ ಅಭ್ಯರ್ಥಿಗಳು ಸಮಿತಿಯ ಒತ್ತಾಯಕ್ಕೆ ಕೊಂಚ ಬೆಂಬಲ ನೀಡಿದ್ದಾರೆ ಎಂದು ತುಳಿದು ಬಂದುದ್ದು, ಚುನಾವಣೆಯ ಬಳಿಕ ಪಕ್ಷದ ನಾಯಕರ ಮೇಲೆ ಒತ್ತಡ ತರಲಾಗುವುದು ಎಂದು ಹೇಳುತ್ತಿದ್ದರಂತೆ.
ಪ್ರತ್ಯೇಕ ಪಾಲಿಕೆಯ ಹೋರಾಟದ ಪರ ಬ್ಯಾಟ್ ಬಿಸಿದ ಶಾಸಕ ಅರವಿಂದ ಬೆಲ್ಲದ್
ಒಂದು ಕಡೆ ಪ್ರತ್ಯೇಕ ಪಾಲಿಕೆಯ ಕೂಗು ಮತ್ತೆ ಮುನ್ನೆಲೇಗೆ ತಂದಿರುವ ಪಾಲಿಕೆ ಪ್ರತ್ಯೇಕ ಹೋರಾಟ ಸಮಿತಿಯ ಕೂಗಿಗೆ, ಹುಬ್ಬಳ್ಳಿ ಧಾರವಾಡ ಪಶ್ಚಿಮ ಬಿಜೆಪಿ ಶಾಸಕ ಅರವಿಂದ ಬೆಲ್ಲದರವರು ಬ್ಯಾಟ್ ಬೀಸಿದ್ದು, ಅದರ ಕುರಿತು ಚಿಂತನೆ ಇಂದಿನ ದಿನಮಾನಗಳಲ್ಲಿ ಅವಶ್ಯವಾಗಿದೆ. ಈಗ ಪಾಲಿಕೆ ಚುನಾವಣೆ ನಡೆಯುತ್ತಿರುವುದರಿಂದ ಚರ್ಚೆ ಮಾಡಲು ಬರುವುದಿಲ್ಲ. ಹಾಗಾಗಿ ಪಾಲಿಕೆ ಚುನಾವಣೆಯ ನಂತರ ಅದರ ಬಗ್ಗೆ ಸುಧೀರ್ಘವಾಗಿ ಚಿಂತನೆ ನಡೆಸುತ್ತೇವೆ. ಈಗಾಗಲೇ ಹಲವರು ಬಿಜೆಪಿ ಪಕ್ಷದ ಧಾರವಾಡ ಪಾಲಿಕೆ ಅಭ್ಯರ್ಥಿಗಳಿಗೆ ಬೆಂಬಲ ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚಿಂತನೆ ಮಾಡಿ ಸೂಲ್ತ ನಿರ್ಧಾರವನ್ನು ತೆಗೆದುಕೊಳ್ಳುವ ಕಡೆಗೆ ಗಮನ ಹರಿಸಲಾಗುವುದು ಎಂದಿದ್ದಾರೆ.
ಚುನಾವಣೆಯ ನಂತರ ಬಲಗೊಳ್ಳುತ್ತಾ ಧಾರವಾಡ ಪ್ರತ್ಯೇಕ ಪಾಲಿಕೆಯ ಹೋರಾಟ…?
ಸ್ಮಾರ್ಟ್ ಸಿಟಿ ಬರೀ ಹುಬ್ಬಳ್ಳಿಗೆ ಮಾತ್ರ ಸೀಮಿತವಾಗಿದೆ. ಎಲ್ಲ ಅಭಿವೃದ್ಧಿ ಕಾರ್ಯಗಳು ಬರೀ ಹುಬ್ಬಳ್ಳಿಗೆ ಮಾತ್ರ ಎನ್ನುವಂತಾಗಿದೆ. ಧಾರವಾಡ ದಿನದಿಂದ ದಿನಕ್ಕೆ ಹಿಂದುಳಿಯುತ್ತಿದ್ದು, ಜಿಲ್ಲಾ ಕೇಂದ್ರ ಧಾರವಾಡ ಇದ್ದರೂ ಸಹ ಪಾಲಿಕೆ ವಿಷಯದಲ್ಲಿ ನಿರ್ಲಕ್ಷಕ್ಕೆ ಎದ್ದು ಕಾಣುತ್ತಿದೆ. ಸ್ಥಳಿಯ ರಾಜ್ಯ ಮಟ್ಟದ ನಾಯಕರು ಕೂಡಾ ಧಾರವಾಡಕ್ಕೆ ಮಹತ್ವ ನೀಡದೇ ಹುಬ್ಬಳ್ಳಿಗೆ ಮಾತ್ರ ಆದ್ಯತೆ ನೀಡುತ್ತಿರುವುದು ಬೇಸರ ತಂದಿರುವ ಸಂಗತಿಯಾಗಿದೆ. ಈ ಕಾರಣದಿಂದಲೇ ಪ್ರತ್ಯೇಕ ಪಾಲಿಕೆ ಬೇಕು ಎಂಬ ಕೂಗು ಈಗ ಬಲಗೊಳ್ಳುತ್ತಿದೆ. ಅಲ್ಲದೆ ಈ ಕುರಿತು ಹಲವು ಹೋರಾಟ, ಸಹಿ ಸಂಗ್ರಹ ಸಹ ಕೂಡಾ ಆಗಿದ್ದು, ಪ್ರಸ್ತುತ ಪಾಲಿಕೆ ಚುನಾವಣೆ ಇದ್ದು ಧಾರವಾಡದ ಪ್ರಜ್ಞಾವಂತ ಮತದಾರರು ತಮ್ಮ ಅಭ್ಯರ್ಥಿಗಳಿಗೆ ಪ್ರತ್ಯೇಕ ಪಾಲಿಕೆ ಬಗ್ಗೆ ಒತ್ತಡ ಹೇರಬೇಕಾಗಿರುವುದು ಧಾರವಾಡ ಮತದಾರರ ಕರ್ತವ್ಯ ಕೂಡಾ ಆಗಿದೆ. ಪಾಲಿಕೆ ಚುನಾವಣೆಯ ನಂತರ ನಮ್ಮ ಹೋರಾಟ ಮತ್ತಷ್ಟು ಬಲಗೊಳಿಸುತ್ತೆವೆ ಎನ್ನುತ್ತಿದ್ದಾರೆ ಪ್ರತ್ಯೇಕ ಪಾಲಿಕೆಯ ಹೋರಾಟ ಸಮಿತಿಯ ಪ್ರಭು ಹೋಸಕೇರಿ ಹಾಗೂ ವೆಂಕಟೇಶ್ ಮಾಚಕನೂರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಈಗ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ಕೂಗು ಪಾಲಿಕೆಯ ಚುನಾವಣೆ ನಡುವೆಯು ಸದ್ದು ಮಾಡುತ್ತಿದ್ದು, ಧಾರವಾಡ ಪ್ರತ್ಯೇಕ ಪಾಲಿಕೆಯ ಹೋರಾಟ ಸಮಿತಿಯ ಸದಸ್ಯರು ಈಗ ಆ್ಯಕ್ಟಿವ್ ಆಗಿದ್ದಾರೆ. ಪ್ರತ್ಯೇಕ ಪಾಲಿಕೆಯ ಕುರಿತು ಜನ ಜಾಗೃತಿ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಧಾರವಾಡ ಪಾಲಿಕೆ ಪ್ರತ್ಯೇಕ ಕೂಗು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎನ್ನುವುದು ಕಾದು ನೋಡಬೇಕು.




