ರಾಮದಾಸ್ ಜೊತೆ ಮಾತನಾಡುವೆ: ಬೊಮ್ಮಾಯಿ

ಮೈಸೂರು: ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಚಿವ ರಾಮದಾಸ್ ಅವರನ್ನು ಕರೆಸಿ ಮಾತನಾಡುವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸೋಮವಾರ ಚಾಮುಂಡಿಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕರೆದು ಮಾತನಾಡಿ ಅವರನ್ನು ಸಮಾಧಾನಪಡಿಸಲಾಗುವುದು. ಅವರು ಪಕ್ಷದಲ್ಲಿ ಹಿರಿಯರು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲರು ಎಂದು ಸಿಎಂ ಹೇಳಿದರು.
ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಕಾನೂನು ದಾಟಬಾರದು ಮತ್ತು ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದು ಸುತರಾಂ ಸರಿಯಲ್ಲ ಎಂದು ಮುಖ್ಟಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಹಿಂದಿನಿಂದಲೂ ತಮಿಳುನಾಡು ರಾಜಕಾರಣಿಗಳು ನೀರಿನ ವಿಷಯವನ್ನು ಮುಂದಿಟ್ಟುಕೊಂಡೆ ಅಧಿಕಾರಕ್ಕೆ ಬಂದಿದ್ದಾರೆ. ಈಗ ಮೇಕೆದಾಟು ಯೋಜನೆಯನ್ನು ರಾಜಕೀಯ ದುರುದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಯೋಜನೆಗೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ದೆಹಲಿಗೆ ಹೋಗಿ, ಯೋಜನೆಯ ವಸ್ತು ಸ್ಥಿತಿಯನ್ನು ಸಂಬಂಧಪಟ್ಟ ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು. ಯೋಜನೆ ಜಾರಿಗೆ ತರುವುದು ಕರ್ನಾಟಕ ಜನತೆಯ ಹಕ್ಕು ಎಂದು ಪ್ರತಿಪಾದಿಸಿದರು.
