ಕೃಷಿಕಾಯ್ದೆ ಹಿಂಪಡೆದ ಬಗ್ಗೆ ಪ್ರತಿಕ್ರಿಯಿಸಲು ಶೋಭಾ ಕರಂದ್ಲಾಜೆ ನಕಾರ

ಮೈಸೂರು ; ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಹಿಂಪಡೆದ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಿರಾಕರಿಸಿದ್ದಾರೆ.
ಮೈಸೂರಿನಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸದೇ ತೆರಳಿದರು. ರೈತರ ಹೋರಾಟಕ್ಕೆ ಮಣಿದು ವಿವಾದಿತ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನ ಹಿಂಪಡೆಯುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ನಿರಾಕರಿಸಿದರು. ನಿನ್ನೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನ ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದರು.
ಈ ನಿರ್ಧಾರದ ಬಗ್ಗೆ ವಿಪಕ್ಷನಾಯಕರು, ಕೇಂದ್ರಸಚಿವರು, ಹಲವು ರಾಜಕೀಯ ನಾಯಕರು ರೈತ ಸಂಘಟನೆಗಳು ಸ್ವಾಗತಿಸಿವೆ. ಈ ಮಧ್ಯೆ ಕೃಷಿ ತಿದ್ದುಪಡಿ ಕಾಯ್ದೆ ರದ್ದು ಕುರಿತು ಮೈಸೂರಿನಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೌನಕ್ಕೆ ಶರಣಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ಮಾತನಾಡುವುದಿಲ್ಲ ಎಂದು ಕೈ ಸನ್ನೆ ಮಾಡಿ ಹೊರಟರು. ಈ ಹಿಂದೆ ಕೃಷಿ ಕಾಯ್ದೆ ವಿರುದ್ದ ಹೋರಾಟ ಮಾಡುತ್ತಿರುವವರು ನಕಲಿ ರೈತರು ಎಂದು ಸ್ವತಃ ಕೇಂದ್ರ ಕೃಷಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಟೀಕಿಸಿದ್ದರು. ಆದ್ರೆ ಈಗ ಕಾಯ್ದೆ ಹಿಂಪಡೆದಾಗ ಮೌನಕ್ಕೆ ಶರಣಾಗಿದ್ದಾರೆ.
