Uncategorizedಜಿಲ್ಲಾ ಸುದ್ದಿವಿಶೇಷ

ಕೋವಿಡ್ ತಡೆಗೆ ಟೊಂಕಕಟ್ಟಿ ನಿಂತ ಮಾಜಿ ಸಚಿವ ಎಂ ಬಿ ಪಾಟೀಲ್; ಬಿಎಲ್ ಡಿಇ ಆಸ್ಪತ್ರೆ ಬಡ ಕೋವಿಡ್ ರೋಗಿಗಳ ಪಾಲಿಗೆ ಸಂಜೀವಿನಿ

ವರದಿ: ರಾಚಪ್ಪ ಬನ್ನಿದಿನ್ನಿ

ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ – ಖಾಸಗಿ ಆಸ್ಪತ್ರೆಗೆ ಮಾದರಿಯಾದ ಎಂ ಬಿ ಪಾಟೀಲ್ ನಡೆ

ವಿಜಯಪುರ: ಬರದನಾಡು ವಿಜಯಪುರ ಜಿಲ್ಲೆಯಲ್ಲಿ ಜಲಕ್ರಾಂತಿ ಮಾಡಿ ಆಧುನಿಕ ಭಾಗೀರಥನಾಗಿರುವ ಕಾಂಗ್ರೆಸ್ ನ ಮಾಜಿ ಸಚಿವ ಎಂ ಬಿ ಪಾಟೀಲ್ ಕೋವಿಡ್ ಎರಡನೇ ಅಲೆಯಲ್ಲಿ ಮಾನವೀಯ ಕಾರ್ಯ ಮಾಡಿ, ಬಡ ರೋಗಿಗಳ ಪಾಲಿಗೆ ಸಂಜೀವಿನಿ ಆಗಿದ್ದಾರೆ.

ಹೌದು, ಎಂ ಬಿ ಪಾಟೀಲ್ ಸದಾ ಜನಪರ ಕಾಳಜಿ ಹೊಂದಿರುವ ಹಿರಿಯ ರಾಜಕಾರಣಿ.ಮಾಜಿ ಸಚಿವ, ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ್ ಈಗ ಕೊರೊನಾ ಸಂಕಷ್ಟ ಕಾಲದಲ್ಲಿ ರೋಗಿಗಳ ನೆರವಿಗೆ ಮುಂದಾಗಿದ್ದಾರೆ.

ಕೊರೊನಾ 2ನೇ ಅಲೆಯಿಂದಾಗಿ ಸರ್ಕಾರ ರೋಗಿಗಳಿಗೆ ಬೆಡ್ , ಆಕ್ಸಿಜನ್ ವ್ಯವಸ್ಥೆ ಮಾಡದಿದ್ದಾಗ, ವಿಜಯಪುರ ಜಿಲ್ಲೆಯಲ್ಲಿ ತಮ್ಮ ಒಡೆತನದ ಖಾಸಗಿ ಬಿಎಲ್ ಡಿಇ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸಾ ವಿಭಾಗ ತೆರೆದು ಕಡಿಮೆ ದರಲ್ಲಿ ಉತ್ತಮ ಚಿಕಿತ್ಸೆ ಒದಗಿಸಿದ್ದಾರೆ‌. ಖಾಸಗಿ ಆಸ್ಪತ್ರೆಗಳಂದರೆ ದುಬಾರಿ ಬಿಲ್ ಮಾಡುತ್ತಾರೆ ಎಂದು ಬಡವರು ಚಿಕಿತ್ಸೆ ಹೋಗುವುದಿಲ್ಲ.ಕೆಲ ಖಾಸಗಿ ಆಸ್ಪತ್ರೆಗಳು ಕೋವಿಡ್ ಸಂಕಷ್ಟದಲ್ಲೂ ದುಡ್ಡು ಮಾಡಲು ಮುಂದಾಗಿವೆ. ಕೋವಿಡ್ ರೋಗಿಗಳ ಬಿಲ್ ಪಟ್ಟಿ ನೋಡಿಯೇ ಎದೆನಡುಕ ಬರುತ್ತೆ ಅಂತಹದರಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸಾ ಶುಲ್ಕವನ್ನೂ ಕಡಿಮೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೊರೋನಾ ಹೆಚ್ಚಳದಿಂದ ಆಸ್ಪತ್ರೆಗಳಲ್ಲಿ ಬೆಡ್‍ಗಳು ಸಿಗುತ್ತಿಲ್ಲ. ರೋಗಿಗಳಿಗೆ ಚಿಕಿತ್ಸೆ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂದಾಗ ಸ್ವತಃ ಮುಂದೆ ಬಂದು ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆ ವೆಚ್ಚದ ಕಡಿಮೆ ಬಗ್ಗೆ ಘೋಷಿಸಿದ್ದರು. ಸದ್ಯ ಸೋಂಕಿತರಿಗೆ ಮೀಸಲಾಗಿರುವ 250 ಹಾಸಿಗೆಗಳನ್ನು 500ಕ್ಕೆ ವಿಸ್ತರಣೆ ಮಾಡಲಾಗಿದೆ. ಇದರಲ್ಲಿ ಜನರಲ್ ವಾರ್ಡನಲ್ಲಿ 200, ಐಸಿಯು ನಲ್ಲಿ 50 ಮತ್ತು ಸ್ಪೆಷಲ್ ರೂಂಗಳಲ್ಲಿ 50 ಒಟ್ಟು 300 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ, 200 ಐಸೊಲೇಶನ್ ಬೆಡ್‍ಗಳು ರೋಗಿಗಳಿಗೆ ಒದಗಿಸುವ ಕಾರ್ಯ ಮಾಡಿದ್ದಾರೆ.ಅಲ್ಲದೇ ಸರಕಾರ ಖಾಸಗಿ ಆಸ್ಪತ್ರೆಗಳಿಗೆ ನಿಗದಿ ಪಡಿಸಿದ ಚಿಕಿತ್ಸಾ ದರಕ್ಕಿಂತಲೂ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಶೇ.70 ಕಡಿಮೆ ಶುಲ್ಕವನ್ನು ಕಳೆದ 2 ತಿಂಗಳಿಂದಲೂ ಪಡೆಯಲಾಗುತ್ತಿದೆ. ಇದೀಗ ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಬಡವರಿಗೆ, ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ರಿಯಾಯಿತಿ ಶುಲ್ಕವನ್ನು ಮುಂದುವರೆಸಲಾಗಿದೆ ಎಂದು ಮಾಜಿ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.

ರಾಜ್ಯ ಸರಕಾರ ಜನರಲ್ ವಾರ್ಡ್ ಳಲ್ಲಿ ಆಕ್ಸಿಜನ್ ರಹಿತ ಬೆಡ್‍ಗೆ ರೂ. 10 ಸಾವಿರ ನಿಗದಿ ಪಡಿಸಿದ್ದರೆ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ರೂ.3 ಸಾವಿರ, ಆಕ್ಸಿಜನ್ ಸಹಿತ ಬೆಡ್‍ಗೆ ಸರಕಾರ ನಿಗದಿ ಪಡಿಸಿದ ರೂ. 12 ಸಾವಿರ ಬದಲಾಗಿ ರೂ. 5 ಸಾವಿರ ಹಾಗೂ ಐ ಸಿ ಯುನಲ್ಲಿ ವೆಂಟಿಲೆಟರ್ ಗೆ ರೂ. 25 ಸಾವಿರ ನಿಗದಿತ ವೆಚ್ಚದ ಬದಲಾಗಿ ರೂ. 8 ಸಾವಿರ ಮಾತ್ರ ಪಡೆಯಲಾಗುತ್ತಿದೆ. ಸದ್ಯ ಆಸ್ಪತ್ರೆಯ 1100 ಹಾಸಿಗೆಗಳಲ್ಲಿ 500 ಪ್ರತ್ಯೇಕ ಹಾಸಿಗೆಗಳನ್ನು ಕೊರೋನಾ ರೋಗಿಗಳಿಗೆ ಸೇವೆಯನ್ನು ಒದಗಿಸಲಾಗುತ್ತಿದ್ದು, ಸಿ ಟಿ ಸ್ಕ್ಯಾನ್ ಸೇರಿದಂತೆ ಎಲ್ಲ ಹೆಚ್ಚಿನ ತಪಾಸಣೆಗಳು ಹಾಗೂ ನಿರಂತರ ವೈದ್ಯರ ಸೇವೆಯನ್ನು ಒಂದೇ ಕಡೆ ಒದಗಿಸಲಾಗಿದೆ. ರೆಮೆಡಿಶಿವಿರ್ ಎಂಜೆಕ್ಷನ್ ಸೇರಿದಂತೆ ಎಲ್ಲ ತುರ್ತು ಔಷಧಿಗಳು ಇಲ್ಲಿನ ರೋಗಿಗಳಿಗೆ ಸದಾ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ.ಸಾಮಾನ್ಯ‌ರೋಗಿಗಳಿಗೂ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

1100 ಹಾಸಿಗೆಗಳಲ್ಲಿ ಕೊರೊನಾ ರೋಗಿಗಳಿಗೆ ಕಾಯ್ದಿರಿಸಿದ 500 ಹಾಸಿಗೆಗಳನ್ನು ಹೊರತು ಪಡಿಸಿ ಉಳಿದ 600 ಹಾಸಿಗೆಗಳಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಎಂದಿನಂತೆ ಮುಂದುವರೆದಿದೆ. ಹೆರಿಗೆ, ಮಕ್ಕಳ ಚಿಕಿತ್ಸೆಗಳು, ಶಸ್ತ್ರ ಚಿಕಿತ್ಸೆಗಳು ಯಥಾಸ್ಥಿತಿಯಲ್ಲಿ ನಡೆದಿವೆ. ಸಾಮಾನ್ಯ ವಾರ್ಡಗಳಿಗೆ ದಾಖಲಾಗುವ ಎಲ್ಲ ಕೊರೊನಾ ಹೊರತಾದ ರೋಗಿಗಳಿಗೆ ಹಾಸಿಗೆ ಶುಲ್ಕ, ಊಟ, ಔಷಧಿ, ಶಸ್ತ್ರ ಚಿಕಿತ್ಸೆಗಳು ಹಾಗೂ ಸಾಮಾನ್ಯ ತಪಾಸಣೆಗಳು ಸಂಪೂರ್ಣ ಉಚಿತವಾಗಿವೆ. ಇದು ಆಸ್ಪತ್ರೆಯ ಮಕ್ಕಳ ವಿಭಾಗದಿಂದ ಹಿಡಿದು ಎಲ್ಲ ವಿಭಾಗಗಳಲ್ಲಿ ದಾಖಲಾಗುವ ಎಲ್ಲ ಸಾಮಾನ್ಯ ವಿಭಾಗದ ರೋಗಿಗಳಿಗೆ ಅನ್ವಯಿಸುತ್ತದೆ.

ಮೂರನೇ ಅಲೆಗೆ ಈಗಿನಿಂದಲೇ ಸಿದ್ಧತೆ- ಮಕ್ಕಳ ಚಿಕಿತ್ಸಾ ವಿಭಾಗ

ಕೊರೊನಾ ಮೂರನೇ ಅಲೆ ಹೆಚ್ಚು ಮಕ್ಕಳಿಗೆ ತಗುಲಿದೆ ಎನ್ನುವ ವರದಿ ಹಿನ್ನೆಲೆಯಲ್ಲಿ ವಿಜಯಪುರ ಬಿಎಲ್ ಡಿಇ ಆಸ್ಪತ್ರೆಯಲ್ಲಿ ಈಗಿನಿಂದಲೇ ಮಕ್ಕಳ ಚಿಕಿತ್ಸೆಗಾಗಿ ವಿಶೇಷ ಚಿಕಿತ್ಸಾ ವಿಭಾಗ ತೆರೆಯಲಾಗುತ್ತಿದೆ.

ಮುಖ್ಯವಾಗಿ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್, ಎಂಜೆಕ್ಷನ್ ಮತ್ತು ಔಷಧಗಳನ್ನು ಈಗಿನಿಂದಲೇ ಸಂಗ್ರಹಿಸಿಲು ಸಿದ್ಧತೆ ನಡೆದಿದ್ದು,ವಿಶೇಷವಾಗಿ ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಆಗುವ ತೊಂದರೆಗಳು ಮತ್ತು ಸೂಕ್ತ ಚಿಕಿತ್ಸೆ ಕುರಿತು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ತಜ್ಞವೈದ್ಯರೊಂದಿಗೆ ಬಿಎಲ್ ಡಿಇ ವೈದ್ಯರ ತಂಡ ಸಮಾಲೋಚನೆ ನಡೆಸಿ ಮಾಹಿತಿ ಮತ್ತು ನೆರವು ಪಡೆದುಕೊಳ್ಳುವ ನಿಟ್ಟಿನಲ್ಲಿ ಕೂಡಲೇ ಕಾರ್ಯಾಗಾರಗಳನ್ನು ಸಂಘಟಿಸುವಂತೆ ಎಂ. ಬಿ. ಪಾಟೀಲ ಸೂಚಿಸಿದ್ದಾರೆ.ಮೂರನೇ ಅಲೆಯನ್ನು ಗಮನಿಸಿ, ಮಕ್ಕಳ ಚಿಕಿತ್ಸಾ ವಿಭಾಗವನ್ನು ಅಲರ್ಟ್ ಮಾಡಲಾಗಿದೆ. ಈಗಾಗಲ ಆಸ್ಪತ್ರೆಯಲ್ಲಿ ಆರಂಭಿಕ ಹಂತದಲ್ಲಿ 60 ಆಕ್ಸಿಜನ್ ಬೆಡ್ ಗಳನ್ನು ಸಜ್ಜುಗೊಳಿಸಲಾಗಿದೆ. ಅಗತ್ಯವಿದ್ದರೆ ಇನ್ನೂ 60 ಬೆಡ್ ಗಳಿಗೆ ವಿಸ್ತರಿಸಿ ಒಟ್ಟು 120 ಆಕ್ಸಿಜನ್ ಸಹಿತ ಮಕ್ಕಳ ಚಿಕಿತ್ಸಾ ವಾರ್ಡ್ ಆರಂಭಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

ಒಟ್ಟಿನಲ್ಲಿ ಮಾಜಿ ಸಚಿವ ಎಂ ಬಿ ಪಾಟೀಲ್ ಮಾನವೀಯತೆಯಿಂದಾಗಿ ಬಡಕೋವಿಡ್ ರೋಗಿಗಳಿಗೂ ಖಾಸಗಿ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಎಂ ಬಿ ಪಾಟೀಲ್ ನಡೆ ಖಾಸಗಿ ಆಸ್ಪತ್ರೆಗಳಿಗೆ ಮಾದರಿಯಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button