ನವದೆಹಲಿ: ಪ್ರಧಾನಿ ಮೋದಿಯವರ ವಿರುದ್ಧ ಅಪಪ್ರಚಾರ ಮಾಡಲು ಕಾಂಗ್ರೆಸ್ ಟೂಲ್ಕಿಟ್ ಸಂಚು ಮಾಡಿದೆ ಎಂಬ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆರೋಪಕ್ಕೆ ಈಗಾಗಲೇ ಕಟುವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ತನ್ನ ಟೀಕೆಯನ್ನು ತೀವ್ರಗೊಳಿಸಿದೆ.
ಸತ್ಯಕ್ಕೆ ಎಂದಿಗೂ ಭಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ಪಕ್ಷದ ಹಿರಿಯ ಮುಖಂಡ ರಣದೀಪ್ ಸುರ್ಜೇವಾಲಾ ಅವರು ಟ್ವಿಟರ್ ಗೆಪತ್ರ ಬರೆದಿದ್ದು, ತಮ್ಮ ಅಧಿಕೃತ ಹ್ಯಾಂಡಲ್ಗಳಿಂದ ನಕಲಿ ದಾಖಲೆ ಪೋಸ್ಟ್ ಮಾಡಿದ 11 ಕೇಂದ್ರ ಸಚಿವರ ಟ್ವೀಟ್ ಗಳಿಗೆ ತಿರುಚಿದ ದಾಖಲೆ ಎಂಬ ಟ್ಯಾಗ್ ಹಾಕಬೇಕೆಂದು ಆಗ್ರಹಿಸಿದ್ದಾರೆ.
ಬಿಜೆಪಿ ಮಾಡುತ್ತಿರುವುದು ಸುಳ್ಳು ಮತ್ತು ದುರುದ್ದೇಶಪೂರ್ವಕ ಪ್ರಚಾರ ಎಂದೂ ಸುರ್ಜೇವಾಲಾ ಆಕ್ಷೇಪಿಸಿದ್ದಾರೆ.
ಪಕ್ಷದ ವಿರುದ್ಧ ಅಪಾಯಕಾರಿ ಆರೋಪಗಳನ್ನು ಹರಡಲು ಮತ್ತು ಅನಗತ್ಯ ರಾಜಕೀಯ ಲಾಭ ಪಡೆಯಲು ಕೆಲ ಬಿಜೆಪಿ ನಾಯಕರು ಟೂಲ್ಕಿಟ್ ದಾಖಲೆಯ ವಿಷಯವನ್ನು ನಕಲಿ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಸಚಿವರಾದ ಗಿರಿಯಾಜ್ ಸಿಂಗ್, ಪಿಯೂಷ್ ಗೋಯಲ್, ಸ್ಮೃತಿ ಇರಾನಿ, ರವಿಶಂಕರ್ ಪ್ರಸಾದ್, ಪ್ರಹ್ಲಾದ್ ಜೋಶಿ, ಧರ್ಮೇಂದ್ರ ಪ್ರಧಾನ್, ರಮೇಶ್ ಪೋಖ್ರಿಯಾಲ್ ನಿಶಾಂಕ್, ತವಾರ್ಚಂದ್ ಗೆಹ್ಲೋಟ್, ಹರ್ಷ್ ವರ್ಧನ್, ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಹೆಸರುಗಳು ಸುರ್ಜೇವಾಲಾ ಮಾಡಿರುವ ಪಟ್ಟಿಯಲ್ಲಿವೆ.
ಈ ಸಚಿವರ ಟ್ವೀಟ್ಗಳು ತಿರುಚಲ್ಪಟ್ಟಿದ್ದು ಎಂದು ಈಗಾಗಲೇ ಟ್ವಿಟರ್ ಗುರುತಿಸಿರುವ ವಿಷಯವನ್ನು ಹೋಲುತ್ತವೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.
ಟೂಲ್ಕಿಟ್ ಆರೋಪ ವಿಚಾರ ತೀವ್ರ ಆಕ್ಷೇಪಗಳಿಗೆ ಕಾರಣವಾಗಿದೆ. ಈ ಸಂಬಂಧ ದೆಹಲಿ ಪೊಲೀಸರು ಸೋಮವಾರ ಟ್ವಿಟ್ಟರ್ ಇಂಡಿಯಾಗೆ ನೋಟೀಸ್ ನೀಡಿದ್ದು, ಟ್ವಿಟ್ಟರ್ ಕಚೇರಿ ಮೇಲೆ ದಾಳಿಯನ್ನೂ ನಡೆಸಿದ್ದಾರೆ.




