ಒಗ್ಗಟ್ಟಾಗುವ ಮೊದಲ ಹೆಜ್ಜೆಯಲ್ಲೇ ಒಡಕು; ಸೋನಿಯಾ ನೇತೃತ್ವದ ಪ್ರತಿಪಕ್ಷಗಳ ಸಭೆಯಲ್ಲಿಲ್ಲ ಎಸ್ಪಿ, ಬಿಎಸ್ಪಿ, ಆಮ್ ಆದ್ಮಿ

ನವದೆಹಲಿ: ಬಿಜೆಪಿಯ ವಿರುದ್ಧ 2024ರ ಲೋಕಸಭಾ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಮೈತ್ರಿ ಬಲಪಡಿಸುವ ಪ್ರಯತ್ನವಾಗಿ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಭೆ ನಡೆದಿದೆ.
ಈ ವರ್ಚುವಲ್ ಸಭೆಯಲ್ಲಿ 19 ಪ್ರತಿಪಕ್ಷಗಳು ಪಾಲ್ಗೊಂಡಿವೆ. ಪ್ರಮುಖವಾಗಿ ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿ, ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್ ಪವಾರ್, ಡಿಎಂಕೆ ನಾಯಕ ಎಂಕೆ ಸ್ಟಾಲಿನ್, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಬಹುಜನ ಸಮಾಜವಾದಿ ಪಕ್ಷ ಮತ್ತು ಸಮಾಜವಾದಿ ಪಕ್ಷ ಈ ಸಭೆಯಲ್ಲಿ ಪಾಲ್ಗೊಂಡಿಲ್ಲ. ಇದೇ ವೇಳೆ ಆಮ್ ಆದ್ಮಿ ಪಾರ್ಟಿಗೆ ಸಭೆಗೆ ಆಹ್ವಾನಿಸಿಲ್ಲ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೆಲ ದಿನಗಳ ಹಿಂದೆ ತಮ್ಮ ಐದು ದಿನಗಳ ದೆಹಲಿ ಭೇಟಿ ವೇಳೆ ಸೋನಿಯಾ, ಪವಾರ್ ಸೇರಿದಂತೆ ಪ್ರತಿಪಕ್ಷಗಳ ಪ್ರಮುಖ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಮೋದಿ ವಿರುದ್ಧ ಎಲ್ಲರೂ ಒಗ್ಗಟ್ಟಾಗಬೇಕಾದ ತುರ್ತಿನ ಬಗ್ಗೆ ಅವರು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದಿರುವ ಈ ಸಭೆ ಬಹಳ ಮಹತ್ವ ಪಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನುಎದುರಿಸಬೇಕಾದ ನಿಟ್ಟಿನ ಕಾರ್ಯತಂತ್ರ ಚರ್ಚೆಯಾಗುವ ಸಾಧ್ಯತೆ ಇದೆ.
ಕಳೆದ ಸಂಸತ್ ಅಧಿವೆಶನದಲ್ಲಿ ಪೆಗಾಸಸ್ ಹಗರಣ ಕುರಿತ ಚರ್ಚೆಗೆ ಅವಕಾಶ ಕೊಡದ ಮೋದಿ ಸರ್ಕಾರದ ಧೋರಣೆ, ರೈತರ ಪ್ರತಿಭಟನೆ ಇವೆಲ್ಲ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿವೆ.
