ಅಭಿಮತಸಂಪಾದಕೀಯ

ಭಾರತದೊಂದಿಗೆ ಶಾಂತಿ ಮಾತುಕತೆಗೆ ಪಾಕ್ ಉತ್ಸುಕ

ಬಂಡಿಯೆಳೆಯುವ ಜೋಡೆತ್ತುಗಳಲ್ಲಿ ಒಂದನ್ನು ಹೊಡೆದರೆ ಮತ್ತೊಂದು ಎತ್ತು ಹೊಡೆತ ತಿನ್ನುವ ಮೊದಲೇ ಹುಷಾರಾಗುತ್ತದಂತೆ. ಹೀಗೆಂದು ಎತ್ತುಗಳ ಸೈಕಾಲಜಿ ಕುರಿತು ನಮ್ಮಮ್ಮ ಒಂದು ಬಾರಿ ಹೇಳಿದ್ದ ನೆನಪು. ಈಗ ಇದು ನೆನಪಾಗಲು ಕಾರಣವೆಂದರೆ ಶಕ್ತಿಶಾಲಿ ರಾಷ್ಟ್ರ ಏನು ಮಾಡಿದರೂ ನಡೆಯುತ್ತದೆ ಎನ್ನುವುದು ರಷ್ಯಾ ಉಕ್ರೇನ್ ಮೇಲೆ ಬರ್ಬರವಾಗಿ ದಾಳಿ ಮಾಡಿದ್ದರಿಂದ ತಿಳಿದಿದೆ. ಜಿಸ್​ಕಾ ಲಾಠಿ ಉಸ್ಕಾ ಭೈಂಸ್ ಎಂಬ ಗಾದೆಯಂತೆ ಯಾರು ಬಲಶಾಲಿಯಾಗಿರುತ್ತಾನೊ ಅವನು ಮಾಡಿದ್ದೇ ಸರಿಯೆಂದು ಜಗತ್ತು ಒಪ್ಪಿಕೊಳ್ಳುತ್ತದೆ. ಇದಕ್ಕೆ ಪ್ಯಾಲಿಸ್ಟೇನ್ ಮೇಲೆ ಇಸ್ರೇಲ್ ದಾಳಿ ಮಾಡಿ ಇಡೀ ನಗರವನ್ನು ನಾಶ ಮಾಡಿದ ಉದಾಹರಣೆಯಿಂದ ತಿಳಿದುಕೊಳ್ಳಬಹುದು ಅಥವಾ ಲೇಟೆಸ್ಟ್ ಉದಾಹರಣೆಯಾಗಿ ಉಕ್ರೇನ್ ನಗರಗಳನ್ನು ಸ್ಮಶಾನ ಮಾಡಿಯೂ ಆರಾಮವಾಗಿರುವ ರಷ್ಯಾವನ್ನೂ ತೆಗೆದುಕೊಳ್ಳಬಹುದು. ಎಲ್ಲೋ ಇರುವ ರಷ್ಯಾ ಉಕ್ರೇನನ್ನು ಉಡೀಸ್ ಮಾಡಿದರೆ ನಮ್ಮ ಪಕ್ಕದ ದೇಶ ಪಾಕಿಸ್ತಾನ ತಾನೆ ಹೊಡೆತ ತಿಂದಂತೆ ಅಲರ್ಟ್​ ಆಗಿದೆ!

ಇದೆಲ್ಲ ಈಗ ಏಕೆ ಹೇಳುತ್ತಿದ್ದೇನೆಂದರೆ ನಮ್ಮ ಪಕ್ಕದ ಕೆಲವೊಂದು ಬಾರಿ ಮಿತ್ರ ರಾಷ್ಟ್ರ, ಕೆಲವೊಂದು ಬಾರಿ ವೈರಿ ರಾಷ್ಟ್ರ, ಮತ್ತೂ ಕೆಲವೊಂದು ಬಾರಿ ಅದೇನೂ ಅಲ್ಲದ ಬರಿ ನೆರೆಯ ರಾಷ್ಟ್ರದಂತೆ ತಟಸ್ಥವಾಗಿರುವ ಪಾಕಿಸ್ತಾನ ಒಮ್ಮೆಲೆ ಶಾಂತಿಮಂತ್ರವನ್ನು ಜಪಿಸತೊಡಗಿದೆ. ಅದೂ ಈ ಬಾರಿ ಈ ಮಂತ್ರವನ್ನು ಜಪಿಸುತ್ತಿರುವುದು ಅಲ್ಲಿಯ ಪ್ರಧಾನಿಯಲ್ಲ, ಬದಲಾಗಿ ಸೇನಾ ಮುಖ್ಯಸ್ಥ ಜನರಲ್ ಬಜ್ವಾ! ಬಜ್ವಾ ಈ ರೀತಿಯಲ್ಲಿ ಶಾಂತಿ ಮಾತನ್ನು ಆಡಲು ಕಾರಣ ಬಲಿಷ್ಟ ರಷ್ಯಾ ಉಕ್ರೇನನ್ನು ಇಡೀ ಪ್ರಪಂಚದ ವಿರೋಧದ ಮಧ್ಯೆಯೂ ಸ್ಮಶಾನವನ್ನಾಗಿಸುತ್ತಿರುವ ರೀತಿಯಲ್ಲಿ, ಎಲ್ಲಿ ಭಾರತ ಪಾಕಿಸ್ತಾನದ ಮೇಲೆ ಇದೇ ರೀತಿಯಲ್ಲಿ ದಾಳಿ ಮಾಡಿ ಯುದ್ಧ ಮಾಡಬಹುದು ಎಂಬ ಶಂಕೆಯಿಂದ..

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಿದ ಇಸ್ಲಾಮಾಬಾದ್ ಭದ್ರತಾ ಸಮಾವೇಶದಲ್ಲಿ 17 ದೇಶದ ಅಂತರಾಷ್ಟ್ರೀಯ ನೀತಿ ತಜ್ಷರನ್ನುದ್ದೇಶಿಸಿ ಪಾಕ್ ಜನರಲ್ ಖಮರ್ ಜಾವೇದ್ ಬಜ್ವಾ ಭಾರತದೊಂದಿಗಿನ ಎಲ್ಲ ವಿವಾದಗಳನ್ನು ಬಗೆಹರಿಸಿಕೊಳ್ಳಲು ಮಾತುಕತೆಯೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಜ್ವಾ ಈ ಸಮಾವೇಶದಲ್ಲಿ ಆಡಿರುವ ಕೆಲವೊಂದು ಮಾತುಗಳನ್ನು ಗಮನಿಸಿದರೆ ಅವರಿಗೆ ಈ ಶಂಕೆ ಏಕೆ ಬಂದಿರಬಹುದೆಂಬುದು ಅರ್ಥವಾಗುತ್ತದೆ. ಇದೇ ವರ್ಷ 2022ರ ಮಾರ್ಚ್​ 9ರಂದು ಪಾಕಿಸ್ತಾನದ ಖನೆರ್​ವಾಲ್ ಜಿಲ್ಲೆಯಲ್ಲಿ ಭಾರತದ ದೂರಗಾಮಿ ಕ್ಷಿಪಣಿಯೊಂದು ಹಾರಿ ಹೋಗಿ ಬಿದ್ದಿತ್ತು. ಪಾಕಿಸ್ತಾನದ ಮಿಲಿಟರಿಯೂ ಭಾರತದ ಕಡೆಯಿಂದ ಒಂದು ಅತಿವೇಗವಾಗಿ ಹಾರಿಬಂದ ಕ್ಷಿಪಣಿಯೊಂದು ಪಾಕಿಸ್ತಾನದ ಭೂಮಿಯಲ್ಲಿ ಬಿದ್ದಿದೆ ಎಂದು ಭಾರತದ ಗಮನಕ್ಕೆ ತಂದಾಗ, ಭಾರತದ ಸೇನೆಯು ಎರಡು ದಿನಗಳ ನಂತರ, ಅಂದರೆ ಮಾರ್ಚ್​ 11ರಂದು ತಣ್ಣಗೆ ಒಂದು ಹೇಳಿಕೆಯನ್ನು ಕೊಟ್ಟಿತ್ತು- ಇದು ಒಂದು ಆಕಸ್ಮಿಕವಾಗಿ ನಡೆದ ಘಟನೆಯಷ್ಟೆ. ಇದೊಂದು ಅಪಘಾತವಷ್ಟೆ ಎಂದು ಹೇಳಿ ಭಾರತದ ಸೇನೆ ಕೈತೊಳೆದುಕೊಂಡಿತು.

ಭಾರತದ ಮಟ್ಟಿಗೆ ಇದೊಂದು ಆಕಸ್ಮಿಕವಿರಬಹುದು. ಆದರೆ ಜನರಲ್ ಬಜ್ವಾ ಹೇಳಿರುವಂತೆ ಇಂಥ ಒಂದು ಅತಿದೊಡ್ಡ ಪ್ರಮಾದಕರ ಆಕಸ್ಮಿಕ ಜಗತ್ತಿನ ಬೇರೆಲ್ಲೂ ನಡೆದಿಲ್ಲ! ಹಾಗಾಗಿ ಬಜ್ವಾಗೆ ಭಾರತ ಆಕ್ರಮಣ ಮಾಡಲು ಯೋಚಿಸುತ್ತಿದೆಯೇ ಎಂಬ ಯೋಚನೆಯಿಂದ ದಿಗಿಲು ಹತ್ತಿರಬೇಕು. ಆದ್ದರಿಂದಲೇ ಬಜ್ವಾ ಉಕ್ರೇನ್ ಗತಿ ತಮ್ಮ ದೇಶಕ್ಕೆ ಬರಬಾರದೆಂಬ ದೂರಾಲೋಚನೆಯಿಂದ ಈ ರೀತಿಯ ಶಾಂತಿ ಮಾತುಕತೆಯ ಮಾತನ್ನು ಆಡುತ್ತಿರಬಹುದೆ?

ಪಾಕ್​ನ ಹಿಂದಿನ ಪ್ರಧಾನಿಗಳು ಭಾರತದೊಂದಿಗೆ ಶಾಂತಿ ಮಾತುಕತೆಯನ್ನು ಆಡಿದರೆ ಅಂಥ ಪ್ರಧಾನಿಗಳನ್ನೇ ಪದಚ್ಯುತಿಗೊಳಿಸಿ ಮಿಲಿಟರಿ ಆಡಳಿತ ತರುತ್ತಿದ್ದ ಪಾಕ್ ಸೇನಾ ಮುಖಂಡರು ಇಂದು ತಾವಾಗಿಯೇ ಭಾರತದೊಂದಿಗೆ ಶಾಂತಿ ಮಾತುಕತೆಯನ್ನು ನಡೆಸುವ ಬಗ್ಗೆ ಮಾತಾಡಿದ್ದಾರೆ! ಬೆಂಕಿಯ ಜ್ವಾಲೆಯಿಂದ ದೂರವಿದ್ದು ಶಾಂತಿಯನ್ನು ಮಾತುಕತೆಯ ಮೂಲಕ ಸಾಧಿಸೋಣ ಎಂದು ಪಾಕ್ ಸೇನಾ ಜನರಲ್ ಬಜ್ವಾ ಹೇಳಿಕೆ ನೀಡಿದ್ದಾರೆ.

ಆದರೆ ಭಾರತ ಮಾತ್ರ ಉರಿಯಲ್ಲಿ ಪಾಕ್ ಭಯೋತ್ಪಾದನಾ ದಾಳಿ ನಡೆದ ನಂತರ ಪಾಕ್ ಕಡೆಯಿಂದ ಎಲ್ಲ ರೀತಿಯ ಭಯೋತ್ಪಾದನಾ ಚಟುವಟಿಕೆ ನಿಂತಲ್ಲಿ ಮಾತ್ರ ಮಾತುಕತೆ ಎಂದು ಸಾರಿ ಹೇಳಿಬಿಟ್ಟಿದೆ. ಇದರ ನಡುವೆಯೇ ಆಗಾಗ ಪಾಕ್ ಹಾಗೂ ಭಾರತದ ಮಧ್ಯೆ ನಡೆಯುತ್ತಿದ್ದ ಸೇನಾ ಚಕಮಕಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಎರಡೂ ದೇಶಗಳು ಹೋದ ವರ್ಷ ಕೈಗೊಂಡ ನಿರ್ಣಯದಿಂದಾಗಿ ಇಂಥ ಚಕಮಕಿಗಳು ಈಗ ನಡೆಯುತ್ತಿಲ್ಲ. ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡರೆ, ಇದೀಗ ಪಾಕ್ ಶಾಂತಿ ಮಾತುಕತೆಯನ್ನು ಆಡಲು ಕರೆನೀಡಿದ್ದನ್ನು ಭಾರತ ಪರಿಗಣಿಸಿದರೆ ಎರಡೂ ದೇಶಗಳ ಶಾಂತಿ ನೆಮ್ಮದಿಗೆ ಒಳ್ಳೆಯದು. ಆದರೆ ಬಜ್ವಾರ ಈ ಶಾಂತಿ ಹೇಳಿಕೆಗೆ ಭಾರತ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎನ್ನುವುದರ ಮೇಲೆ ಮುಂದಿನ ದಿನಗಳಲ್ಲಿ ಭಾರತ ಮತ್ತು ಪಾಕ್ ನಡುವಿನ ಸಂಬಂಧ ನಿರ್ಧರಿಸಲಿದೆ.

ಓಂಪ್ರಕಾಶ್ ನಾಯಕ್, ಹಿರಿಯ ಉಪಸಂಪಾದಕ BMG24x7ಲೈವ್​ಕನ್ನಡ

Spread the love

Related Articles

Leave a Reply

Your email address will not be published. Required fields are marked *

Back to top button