ಕನಿಷ್ಠ ವಿನಯವನ್ನೂ ಮರೆತ ‘ಯೋಗಗುರು’

ಬರಹ: ಹೈದರ್
ಕೋವಿಡ್ ಮೊದಲನೆಯ ಅಲೆಯಲ್ಲಿ ಕೊರೋನ ವೈರಸ್ ಗೆ ವ್ಯಾಕ್ಸಿನ್ ತಯಾರಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ರಾಷ್ಟ್ರಗಳು ಪ್ರಯತ್ನದಲ್ಲಿದ್ದಾಗಲೆ ಯೋಗ ಗುರು ರಾಮ್ ದೇವ್ ಕೊರೋನಿಲ್ ಎಂದು ಕೊರೋನ ಸೋಂಕಿಗೆ ಔಷಧಿಯನ್ನು ತಯಾರಿಸಿದ್ದೇನೆ ಎಂದು ಹೇಳಿಕೊಂಡು ಪತಂಜಲಿ ಉತ್ಪನ್ನಗಳ ಪ್ಯಾಕೇಟ್ ಗಳನ್ನು ಪ್ರದರ್ಶಿಸಿ ಕೊರೊನಕ್ಕೆ ಔಷಧೀ ಕಂಡುಕೊಂಡೆ ಎಂದು ಕಳೆದ ವರ್ಷವೇ ಬೀಗಿದ್ದರು ನಂತರ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ದೊರೆಯದೆ ಬಾಬಾ ರಾಮ್ ದೇವ್ ಕಂಗಾಲಾಗಿದ್ದರು.
ಕೊರೊನಿಲ್ ಅನ್ನು ಮಾರಾಟ ಮಾಡುವ ಎಲ್ಲ ತಂತ್ರಗಳು ವಿಫಲವಾಗಿದ್ದರಿಂದ ವ್ಯಾಪಾರಿ ಮನೋಭಾವದ ರಾಮ್ ದೇವ್ ಹೇಗಾದರೂ ಮಾಡಿ ಕೊರೊನಿಲ್ ವ್ಯಾಪಾರವನ್ನು ಮಾಡಲೇಬೇಕು ಎಂದು ಇದಕ್ಕೆ ಅಡ್ಡಿಯಾಗಿರುವ ಅಲೋಪಥಿ ವೈದ್ಯಕೀಯ ಚಿಕಿತ್ಸೆಯ ಬಗೆಗೆ ಗೇಲಿ ಮಾಡುತ್ತಾ
“ಅಲೋಪಥಿಯು ಒಂದು ಮೂರ್ಖ ವಿಜ್ಞಾನ” ಎಂದು ಅಪಪ್ರಚಾರ ಮಾಡಲು ಮುಂದಾಗಿ ಕೊನೆಗೆ ಟೀಕೆಗೆ ಗುರಿಯಾಗಿ ಅದು ವಾಟ್ಸಪ್ ನಲ್ಲಿ ಬಂದಿದ್ದನ್ನು ಓದಿದೆ ಎಂದು ಸಬೂಬು ಹೇಳಿ ಆ ಬಗ್ಗೆ ಕ್ಷಮೆ ಕೇಳಿದ್ದು ಆಯಿತು.
ಆದರೂ ತನ್ನ ಗೋದಾಮಿನ ಕೊರೊನಿಲ್ ಉತ್ಪನ್ನಗಳ ಸ್ಥಿತಿಯನ್ನು ನೆನೆಸಿಕೊಂಡು ಅಲೋಪಥಿಯ ಬಗ್ಗೆ ಒಳಗೊಳಗೆ ಕುದ್ದುಹೋಗಿ, ಯೋಗ ಮಾಡುತ್ತಿದ್ದಾಗಲೇ ಅಲೋಪಥಿಯ ವ್ಯಾಕ್ಸಿನ್ ಎರಡು ಡೋಸ್ ಪಡೆದ ಸಾವಿರ ವೈಧ್ಯರು ಪ್ರಾಣ ಕಳೆದುಕೊಂಡಿದ್ದಾರೆ ವ್ಯಾಕ್ಸಿನ್ ನಿಂದ ಕೊರೋನ ವೈರಸ್ ನಿಯಂತ್ರಿಸಲಾಗದು ಎಂದು ವೈದ್ಯರುಗಳನ್ನು ಡಾಕ್ಟರ್.. ಟರ್.. ಟರ್.. ಟರ್.. ಎಂದು ಹಂಗಿಸುತ್ತಾ ಬಾಬಾ ರಾಮ್ ದೇವ್ ಯೋಗ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು ಇದರಿಂದ ವ್ಯಾಪಕವಾದ ಆಕ್ರೋಶ ವ್ಯಕ್ತವಾಯಿತು.
ಇದರಿಂದ ಭಾರತೀಯ ವೈದ್ಯ ಸಂಘವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಈ ನಡುವೆ ಉತ್ತರಾಖಂಡದ ಐಎಂಎ 1000 ಕೋಟಿಯ ಮಾನನಷ್ಟ ದಾವೆ ಹೂಡಲು ಬಾಬಾ ರಾಮ್ ದೇವ್ ಗೆ ನೋಟೀಸ್ ಜಾರಿ ಮಾಡಿತು.
ನಂತರದಲ್ಲಿ ವೈಧ್ಯಕೀಯ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಾಬಾ ರಾಮ್ ದೇವ್ ರನ್ನು ಬಂದಿಸಬೇಕು ಎಂಬ ಕೂಗು ವ್ಯಾಪಕವಾಯಿತು ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಈ ಯೋಗ ಗುರುವಿನ ಮತ್ತೊಂದು ವಿಡಿಯೋ ಬುದುವಾರ ವೈರಲ್ ಆಗಿದ್ದು ಅದರಲ್ಲಿ ಯೋಗಗುರುವನ್ನು ಬಂದಿಸಬೇಕು ಎಂಬ ಕೂಗಿಗೆ ಪ್ರತಿಕ್ರಿಯೆಯಾಗಿ, ಬಾಬಾ ರಾಮ್ ದೇವ್ ನನ್ನನ್ನು ಅವರ ಅಪ್ಪನೂ ಬಂದಿಸಲು ಸಾಧ್ಯವಿಲ್ಲ ಎಂದು ಹೇಳಿ ಜೋರಾಗಿ ನಗುತ್ತಿರುವುದು ಕಾಣುತ್ತಿದೆ.
ಈ ಮೂಲಕ ಯೋಗ ಗುರು ಮತ್ತೊಮ್ಮೆ ವಿವಾದಕ್ಕಿಡಾಗಿದ್ದಾರೆ ನಡುವೆ ಬಾಬಾ ರಾಮದೇವ್ ಅವರು ನಡೆಸುತ್ತಿರುವ ಅಪಪ್ರಚಾರವನ್ನು ಕೊನೆಗಾಣಿಸಲು ಕ್ರಮಕ್ಕೆ ಆಗ್ರಹಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ.




