ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಮತಾಂತರ ಕಾಯ್ದೆ ಜಾರಿಯಾಗಿದೆ: ದತ್ತಾತ್ರೇಯ ಹೊಸಬಾಳೆ

ಧಾರವಾಡ: ಮತಾಂತರ ನಿಷೇಧ ಕಾಯ್ದೆಗೆ ಅಲ್ಪಸಂಖ್ಯಾತರು ವಿರೋಧ ಮಾಡುತ್ತಿದ್ದಾರೆ. ಈಗಾಗಲೇ 10 ರಾಜ್ಯಗಳು ಮತಾಂತರ ತಡೆ ಕಾಯ್ದೆ ಜಾರಿ ಮಾಡಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಇದ್ದಾಗಲೇ ಈ ಕಾಯ್ದೆ ಜಾರಿಗೆ ಬಂದಿದ್ದು, ಅಲ್ಲಿ ಕಾಂಗ್ರೆಸ್ನವರೇ ಕಾಯ್ದೆ ಮಾಡಿದ್ದಾರೆ. ಮತಾಂತರ ಕಾಯ್ದೆ ಬರಲಿ, ಬಂದ ಮೇಲೆ ತಿದ್ದುಪಡಿ ಇದ್ದರೆ ಮಾಡಬಹುದು ಎನ್ನುವ ಮೂಲಕ ಆರ್ಎಸ್ಎಸ್ ಅಖಿಲ ಭಾರತೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ನೇರವಾಗಿ ಸಹಮತಿ ವ್ಯಕ್ತಪಡಿಸಿದರು.
ಧಾರವಾಡದ ಮುಮ್ಮಿಗಟ್ಟಿ ಗ್ರಾಮದ ಗರಗ ರಸ್ತೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆರ್ ಎಸ್ ಎಸ್ ಸಂಘದ ಆಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತಾಂತರ ಜಾರಿಗೆ ತರುವಂತಹ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಯಿದೆ ಬರುವ ಮುನ್ನವೇ ವಿರೋಧ ಸರಿಯಲ್ಲ. ಮತಾಂತರ ನಿಲ್ಲಬೇಕಿದೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧೋರಣೆಯೂ ಇದೇ ಆಗಿದೆ ಎಂದರು.
ನಾಗಾಲ್ಯಾಂಡ್ ಮತ್ತು ಮಿಜೋರಾಂನಲ್ಲಿ ಹಿಂದುಗಳ ಸಂಖ್ಯೆ ಕಡಿಮೆ:
ನಾಗಲ್ಯಾಂಡ್ ಮತ್ತು ಮಿಜೋರಾಂದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಿದೆ. ಹೀಗಾಗಿ, ಅಲ್ಲಿ ನಮ್ಮ ಶಾಖೆಗಳು ಕಡಿಮೆಯಿವೆ. ಮೇಘಾಲಯದಲ್ಲಿ ಸೇವಾ ಕಾರ್ಯಗಳು ಇವೆ. ಲಡಾಖ್ನಲ್ಲಿ ಸಂಘದ ಶಾಖೆ ಇದೆ. ಲಕ್ಷ ದ್ವೀಪದಲ್ಲಿ ಸಾಪ್ತಾಹಿಕ ಮಿಲನ್ ಮಾತ್ರ ಇದೆ. ಇಲ್ಲಿ ಜನರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಅಲ್ಲಿ ಸಂಘ ಚಟುವಟಿಕೆ ಕಡಿಮೆ ಇದೆ ಎಂದು ತಿಳಿಸಿದರು.
ಜನಸಂಖ್ಯೆ ನಿಯಂತ್ರಣ ಕಾಯ್ದೆ ವಿಚಾರದ ಬಗ್ಗೆ ಮಾತನಾಡಿದ ಅವರು, ಪ್ರತಿ ದೇಶಕ್ಕೂ ತನ್ನದೇ ಆದ ಜನಸಂಖ್ಯೆ ನಿಯಂತ್ರಣ ಕಾಯ್ದೆ ಇದೆ. ಜನಸಂಖ್ಯೆ ಕಾಯ್ದೆ ಬಗ್ಗೆ ನಾವು ಈ ಹಿಂದೆಯೇ ಠರಾವ್ ಮಾಡಿದ್ದೇವೆ. ಐದಾರು ವರ್ಷಗಳ ಹಿಂದಿಯೇ ಸಂಘದ ಬೈಠಕ್ಗಳಲ್ಲಿಯೇ ಠರಾವ್ ಮಾಡಿಗಿದೆ. ಅದನ್ನೇ ಇತ್ತೀಚೆಗೆ ಮೋಹನ ಭಾಗವತ್ ಪುನರ್ಮನನ ಮಾಡಿದ್ದಾರೆ. ಏಕರೂಪ ನಾಗರಿಕ ಸಂಹಿತೆ ವಿಚಾರ ಸರ್ಕಾರವೇ ಈ ಸಂಹಿತೆ ಬಗ್ಗೆ ಮಾತನಾಡಿದೆ ಹೇಳಿದರು.
ದೀಪಾವಳಿಗೆ ಪಟಾಕಿ ಹೊಡೆಯಬಾರದೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪರಿಸರ ಮಾಲಿನ್ಯ ಹೆಸರಿನಲ್ಲಿ ಪಟಾಕಿ ಬೇಡ ಅಂತಾರೆ. ಆದರೆ, ಇದು ದೀಪಾವಳಿಗೆ ಮಾತ್ರವೇ ಯಾಕೆ ವಿಚಾರ ಬರುತ್ತದೆ. ಅನೇಕ ವಿದೇಶಗಳಲ್ಲಿಯೂ ಪಟಾಕಿಗಳಿವೆ. ಅಲ್ಲಿಯೂ ಸಂಭಮ್ರಗಳಿದ್ದಾಗ ಪಟಾಕಿ ಹೊಡೆಯುತ್ತಾರೆ. ಆದರೆ, ಭಾರತದಲ್ಲಿ ದೀಪಾವಳಿ ಬಂದಾಗ ಮಾತ್ರ ಯಾಕೆ ಬ್ಯಾನ್ ಅಂತಾರೆ. ಪಟಾಕಿ ಮಾಡಿ, ಮಾರಾಟಕ್ಕೆ ಹಂಚಿಕೆಯಾದ ಮೇಲೆ ಬ್ಯಾನ್ ಅಂತಾರೆ. ಜನರ ಕೈಗೆ ಪಟಾಕಿ ಬಂದ ಬಳಿಕ ಬ್ಯಾನ್ ಅಂತಾರೆ. ಪರಿಸರ ಮಾಲಿನ್ಯ ವಿಷಯ ಮಹತ್ವವೇ ಇದೆ. ಆದರೆ, ಪಟಾಕಿ ತಯಾರಕರ ಜೀವನದ ಬಗ್ಗೆಯೂ ಚಿಂತನೆ ಮಾಡಬೇಕಲ್ಲ. ಪಟಾಕಿ ಬ್ಯಾನ್ ಮಾಡಿದ್ರೆ ಆ ಕಾರ್ಮಿಕರಿಗೆ ಏನು ಮಾಡುತ್ತಾರೆ. ಅವರ ಪುನರ್ವಸತಿಗೆ ಏನು ದಾರಿಗಳಿವೆ. ಈ ಎಲ್ಲವೂಗಳ ಬಗ್ಗೆಯೂ ಚಿಂತನೆ ಮಾಡಬೇಕು ಎಂದರು.




