
ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದು, ಎಲ್ಲವೂ ನನಗೆ ಗೊತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಬುಧವಾರ ಸದಾಶಿವನಗರ ನಿವಾಸದಲ್ಲಿ ಪ್ರತಿಕ್ರಿಯಿಸಿದ ಅವರು ಕುಮಾರಸ್ವಾಮಿ ಅವರು ಬಹಳ ಹಿರಿಯರು, ಬುದ್ಧಿವಂತರು ಹಾಗೂ ಸಾಹಿತಿ. ಅವರಿಗೆ ರಾಜಕಾರಣದಲ್ಲಿ ಬಹಳ ಅನಭವವಿದೆ. ಅವರಿಗೆ ಹೋರಾಟದ ಕುಟುಂಬದ ಹಿನ್ನೆಲೆಯಿದೆ. ಅವರು ಚಲನಚಿತ್ರ ನಿರ್ದೇಶಕರು ಹಾಗೂ ನಿರ್ಮಾಪಕರೂ ಆಗಿದ್ದಾರೆ. ಅವರಿಗೆ ಯಾವ ಸಮಯದಲ್ಲಿ ಏನು ಹೇಳಬೇಕು ಅನ್ನೋದು ಗೊತ್ತಿದೆ ಎಂದು ವ್ಯಂಗ್ಯಭರಿತ ಧಾಟಿಯಲ್ಲಿ ಹೇಳಿದರು.
ನಾಡ ಹಿತಕ್ಕೆ ನಮ್ಮ ಪಕ್ಷ ಬದ್ಧ. ನಮ್ಮ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ಕುಮಾರಸ್ವಾಮಿ ಅವರ ಟ್ವೀಟ್ ಟೀಕೆಗೆ ನಾವು ಉತ್ತರ ನೀಡಬೇಕಾಗುತ್ತದೆ. ಅವರ ಮಾತಿನಲ್ಲಿ ಸಾಹಿತ್ಯದ ಶಬ್ಧಕೋಶವೇ ಅಡಗಿದ್ದು, ನಾನು ಅದನ್ನು ಕಲಿತುಕೊಳ್ಳುತ್ತೇನೆ. ರಾಜಕೀಯದಲ್ಲಿ ಗೆಲವು, ಸೋಲು ಸಹಜ. ಅವರು ಟೀಕಿಸುತ್ತಿರಲಿ ಎಂದರು.
ಆಶ್ಚರ್ಯ ಎಂದರೆ, ಚನ್ನಪಟ್ಟಣದಲ್ಲಿ ಫೈರಿಂಗ್ ಆಯ್ತು ಎಂದು ಎಸ್.ಎಂ. ಕೃಷ್ಣ ಅವರ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡಿದರು. ಗಂಗಾಧರಮೂರ್ತಿ ಕೊಲೆ ಪ್ರಕರಣ ಸಂಬಂಧ ಪಾದಯಾತ್ರೆ ಮಾಡಿದರು. ತಲೆ ಮೇಲೆ ಸೀಮೆಎಣ್ಣೆ ಡಬ್ಬ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದಾರೆ. ಅದೇ ರೀತಿ ಕಾಂಗ್ರೆಸ್ ಪಕ್ಷ ಕೂಡ ಪಾದಯಾತ್ರೆ ಮಾಡುತ್ತಿದೆ ಎಂದು ಹೇಳಿದರು.
ವಿರೋಧಿಗಳು ಏನೇ ಹೇಳಿದರು ಮೇಕೆದಾಟು ಪಾದಯಾತ್ರೆ ಪಕ್ಷಾತೀತ ಹೋರಾಟ. ದಳದವರು, ಬಿಜೆಪಿಯವರು, ಸಂಘ ಸಂಸ್ಥೆಗಳು ಬರಲಿ. ಸಿನಿಮಾ ಕ್ಷೇತ್ರದವರು, ಮಠಾಧೀಶರು, ಕಾಲೇಜು, ಅಪಾರ್ಟ್ ಮೆಂಟ್ ಸಂಘಗಳಿಗೂ ಮನವಿ ಮಾಡಿದ್ದೇನೆ. ಯಾರಿಗೆ ಇಚ್ಛೆ ಇದೆ, ಯಾರಿಗೆ ಇಚ್ಛೆ ಇಲ್ಲ ಎಂಬುದು ಅವರವರಿಗೆ ಬಿಟ್ಟದ್ದು ಎಂದರು.
ಮೇಕೆದಾಟು ಯೋಜನೆ ನನಗಾಗಿ ಅಲ್ಲ, ಜನರಿಗಾಗಿ. ಹೋರಾಟ, ತ್ಯಾಗ, ಬಲಿದಾನ ನಮ್ಮ ಪಕ್ಷದ ಇತಿಹಾಸ. ಅದು ನಮ್ಮ ರಕ್ತದಲ್ಲಿ ಹರಿದು ಬಂದಿದೆ. ಕುಮಾರಣ್ಣನವರು ಏನೇ ಹೇಳಿದರೂ ಬಹಳ ಸಂತೋಷ. ಅದನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ. ಅವರು ಏನು ಬೇಕಾದರೂ ತಿದ್ದಲಿ. ಅವರ ಜತೆ ಪ್ರಮಾಣ ವಚನ ಸ್ವೀಕರಿಸುವಾಗ ಹಾಕಿದ್ದ ಪಂಚೆಯನ್ನೇ ಹಾಕಿದ್ದೆ ಎಂದೂ ಶಿವಕುಮಾರ್ ಹೇಳಿದರು.



