
ಬೆಂಗಳೂರು: ಉತ್ತರಾಖಂಡದಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿರುವ ಕನ್ನಡಿಗರ ರಾಜ್ಯ ಸರ್ಕಾರ ಸಹಾಯವಾಣಿ ಸ್ಥಾಪಿಸಿದೆ. ಪ್ರವಾಹ ಪರಿಸ್ಥಿತಿಗೆ ಸಿಲುಕಿರುವ ಪ್ರಯಾಣಿಕರು, ಯಾತ್ರಿಕರು, ಪ್ರವಾಸಿಗರು ಮತ್ತು ಉತ್ತರಾಖಂಡ ರಾಜ್ಯದ ವಿವಿಧೆಡೆ ಭೇಟಿ ನೀಡಿರುವ ಕರ್ನಾಟಕದ ನಿವಾಸಿಗಳನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲು ಈ ಸಹಾಯವಾಣಿ ನೆರವಾಗಲಿದೆ.
ಸಂತ್ರಸ್ತರು ಮತ್ತು ಅವರ ಸಂಬಂಧಿಗಳು ಸಹಾಯವಾಣಿಯನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ನೀಡುವಂತೆ ಕೋರಲಾಗಿದೆ. ಈ ಮಾಹಿತಿಯನ್ನು ಉತ್ತರಾಖಂಡ್ ಸರ್ಕಾರದೊಂದಿಗೆ ಹಂಚಿಕೊಂಡು ಸಂತ್ರಸ್ತರ ತ್ವರಿತ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸಂಬಂಧಿಸಿದವರು ಕರ್ನಾಟಕ ಸರ್ಕಾರದ ತುರ್ತು ಕಾರ್ಯಾಚರಣೆ ಕೇಂದ್ರದ ದೂರವಾಣಿ ಸಂಖ್ಯೆಗಳು 080-1070 (ಟೋಲ್ ಫ್ರೀ) ಹಾಗೂ 080-22340676 ಈ ಸಂಖ್ಯೆಯನ್ನು ದಿನದ 24 ಗಂಟೆಯೂ ಸಂಪರ್ಕಿಸಬಹುದಾಗಿದೆ.



