
ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆ ಸ್ಥಗಿತಗೊಳಿಸಲು ನಿರಂತರ ಪ್ರಯತ್ನವನ್ನು ಸರ್ಕಾರ ಮಾಡಿದೆ. ಯಾವುದೇ ಲಾಠಿಚಾರ್ಜ್, ಬಂಧನಕ್ಕೆ ಅವಕಾಶ ನೀಡದೆ ಸರ್ಕಾರ ಸಮಚಿತ್ತದಿಂದ ಪರಿಸ್ಥಿತಿ ನಿಭಾಯಿಸಿದೆ. ಕೋವಿಡ್ ಪ್ರಕರಣ ಹೆಚ್ಚಲು ಪಾದಯಾತ್ರೆ ನಡೆಸಿದವರು ಕೂಡ ಕಾರಣರು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಆರೋಗ್ಯ ಕಾಪಾಡಲು ಕಾಂಗ್ರೆಸ್ ಪಾದಯಾತ್ರೆ ಸ್ಥಗಿತಗೊಳಿಸಿರುವುದಕ್ಕೆ ಅಭಿನಂದನೆಗಳು. ಅನೇಕ ಅಮಾಯಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಎಷ್ಟು ಮಂದಿಗೆ ಸೋಂಕು ಬಂದಿದೆ ಎಂದು ಗೊತ್ತಿಲ್ಲ. ಸರ್ಕಾರ ಪ್ರತಿಭಟನೆ ತಡೆಯಲಿಲ್ಲ. ಆದರೆ ಈ ಸಮಯದಲ್ಲಿ ಪ್ರತಿಭಟನೆ ಬೇಡ ಎಂದು ಕೋರಲಾಗಿತ್ತು. ಡಿ.ಕೆ.ಶಿವಕುಮಾರ್ ಅವರು ಕೋವಿಡ್ ನಿರ್ವಹಣೆ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಅಧಿಕಾರಿಗಳ ಸ್ಪೂರ್ತಿ ಕಳೆಯುವ ಕೆಲಸ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ, ನೀರಾವರಿ ಕ್ಷೇತ್ರದಲ್ಲಿ ಆಳ ಜ್ಞಾನ ಹೊಂದಿದ್ದು, ಯಾವ ರೀತಿ ಹೋರಾಟ ಮಾಡಬೇಕೆಂಬುದು ತಿಳಿದಿದೆ. ಈ ವಿಚಾರದಲ್ಲಿ ಪ್ರತಿಪಕ್ಷಗಳು ಸರ್ಕಾರದೊಂದಿಗೆ ಕೈ ಜೋಡಿಸಬೇಕು. ಉತ್ತರ ಪ್ರದೇಶದ ಕಾಂಗ್ರೆಸ್ ನಿಗದಿ ಮಾಡಿದ್ದ ಧರಣಿಯನ್ನು ಮುಂದೂಡಿದೆ. ಅದೇ ರೀತಿ ಇಲ್ಲೂ ಕಾಂಗ್ರೆಸ್ ಮಾಡಬೇಕಿತ್ತು ಎಂದರು.
ರಾಜ್ಯ ಸರ್ಕಾರ ಪ್ರಕರಣ ದಾಖಲಿಸಿ, ನೋಟಿಸ್ ಜಾರಿ ಮಾಡಿ ಕ್ರಮ ವಹಿಸಿದೆ. ಬಂಧಿಸುವುದು, ಲಾಠಿ ಚಾರ್ಜ್ ಮಾಡುವುದು ದೊಡ್ಡ ವಿಚಾರವಲ್ಲ. ಆದರೆ ಇಂದಿನ ಸ್ಥಿತಿಯಲ್ಲಿ ಸಿಎಂ ಅವರು, ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ಇದು ಅಂತರರಾಜ್ಯದ ಸಮಸ್ಯೆಯಾಗಿದ್ದು, ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೋಗಿದೆ. ಡಿಎಂಕೆ ಪಕ್ಷ ಯಾರೊಂದಿಗೆ ಸರ್ಕಾರ ರಚಿಸಿದೆ ಎಂದು ನೋಡಬೇಕು. ಅವರ ಹೈಕಮಾಂಡ್ ಜೊತೆಯೇ ಅವರು ಚರ್ಚೆ ಮಾಡಬಹುದಿತ್ತು ಎಂದರು.
ಕೋವಿಡ್ ನಿಯಂತ್ರಣಕ್ಕೆ ಕ್ರಮ
ಡಿಸೆಂಬರ್ 28 ರಂದು ಬೆಂಗಳೂರಿನಲ್ಲಿ 269 ಹಾಗೂ ಉಳಿದ ಭಾಗದಲ್ಲಿ 87 ಸೇರಿ ಒಟ್ಟು 356 ಪ್ರಕರಣಗಳಿದ್ದವು. ಜ. 5 ರಂದು ಬೆಂಗಳೂರಿನಲ್ಲಿ 3,605 ಹಾಗೂ 641 ಪ್ರಕರಣ ರಾಜ್ಯದ ಉಳಿದ ಭಾಗದಲ್ಲಿ ಕಂಡುಬಂದಿತ್ತು. ಜನವರಿ 11 ರಂದು ಬೆಂಗಳೂರಿನಲ್ಲೇ 10,800 ಪ್ರಕರಣ ಹಾಗೂ ರಾಜ್ಯದ ಉಳಿದೆಡೆ 3,673 ಪ್ರಕರಣ ಕಂಡುಬಂತು. ಡಿಸೆಂಬರ್ 28 ರಿಂದ ಜನವರಿ 11 ರವರೆಗೆ (15 ದಿನಗಳಲ್ಲಿ), ಬೆಂಗಳೂರು ನಗರ ಜಿಲ್ಲೆಯಲ್ಲಿ 32.64%, ಬಿಬಿಎಂಪಿ ವ್ಯಾಪ್ತಿಯಲ್ಲಿ 32.65%, ರಾಜ್ಯದಲ್ಲಿ 36.44% ಪ್ರಕರಣದ ಸರಾಸರಿ ಏರಿಕೆ ವೇಗ ಕಂಡುಬಂದಿದೆ ಎಂದು ವಿವರಿಸಿದರು.
ಮೊದಲ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ 10-12 ದಿನಕ್ಕೆ ದುಪ್ಪಟ್ಟಾದ್ದರೆ, ಎರಡನೇ ಅಲೆಯಲ್ಲಿ 8 ದಿನಕ್ಕೆ ಹಾಗೂ ಮೂರನೇ ಅಲೆಯಲ್ಲಿ ಎರಡರಿಂದ ಎರಡೂವರೆ ದಿನದಲ್ಲಿ ದುಪ್ಪಟ್ಟಾಗುತ್ತಿದೆ. ಆದ್ದರಿಂದ ಎರಡನೇ ಡೋಸ್ ಗೆ ಬಾಕಿ ಉಳಿದವರು ಶೀಘ್ರ ಲಸಿಕೆ ಪಡೆಯಬೇಕು ಎಂದು ಅವರು ಮನವಿ ಮಾಡಿದರು.
ಕೋವಿಡ್ ಪರೀಕ್ಷೆಗೆ ಪ್ರತಿ ದಿನ 2 ಲಕ್ಷದ ಗುರಿ ನೀಡಿದ್ದು, ಇನ್ನೂ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ. ಬೆಂಗಳೂರಿನಲ್ಲಿ 1 ಲಕ್ಷದಷ್ಟು ಪರೀಕ್ಷೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 265 ಪರೀಕ್ಷೆ ಲ್ಯಾಬ್ ಸ್ಥಾಪಿಸಿದ್ದು, ಮೊದಲ ಬಾರಿಗೆ 5 ಜೀನೋಮಿಕ್ ಸೀಕ್ವೆನ್ಸ್ ಲ್ಯಾಬ್ ಆರಂಭಿಸಲಾಯಿತು. ಕೇಂದ್ರ ಸರ್ಕಾರ 4 ಸೇರಿ ಒಟ್ಟು 9 ಜೀನೋಮಿಕ್ ಸೀಕ್ವೆನ್ಸ್ ಲ್ಯಾಬ್ ಇದೆ. 1,875 ಮಾದರಿಗಳನ್ನು ಒಂದು ಬ್ಯಾಚ್ ನಲ್ಲಿ ಸೀಕ್ವೆನ್ಸಿಂಗ್ ಮಾಡುವ ಸೌಲಭ್ಯವಿದೆ ಎಂದು ತಿಳಿಸಿದರು.
ಮಕ್ಕಳ ಚಿಕಿತ್ಸೆ
ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಶೇ.30 ರಷ್ಟು ಹಾಸಿಗೆಗಳನ್ನು ಮಕ್ಕಳ ಚಿಕಿತ್ಸೆಗೆ ಮೀಸಲಿಡಲಾಗಿದೆ. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯನ್ನು ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ಮೀಸಲಿಡಲಾಗಿದೆ. ಎಲ್ಲಾ ಶಾಲೆಗಳಲ್ಲಿ 15 ದಿನಕ್ಕೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದರು.



