ಕುಡುಗೋಲ ತಗುಲಿ ವಿದ್ಯಾರ್ಥಿನಿ ಸಾವು ಪ್ರಕರಣ : ಆರೋಪಿಗೆ 2 ವರ್ಷ ಶಿಕ್ಷೆ

ಕಲಬುರಗಿ : ಕುಡುಗೋಲ ತಗುಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘಾ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ಮೊಹ್ಮದ್ ಮೆಹಬೂಬ್ ಸುಲ್ತಾನ್ಸಾಬ್ ಶಿಕ್ಷೆಗೆ ಗುರಿಯಾದ ಆಪಾಧಿತ, ಇಲ್ಲಿನ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು 2 ವರ್ಷಗಳ ಶಿಕ್ಷೆ ಹಾಗೂ 25 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಮೊಹ್ಮದ್ ಮೆಹೆಬೂಬ್ ನಿರ್ಲಕ್ಷಕ್ಕೆ ಮೇಘಾ ಬಲಿ:
ಕಳೆದ 2019ರ ಏಪ್ರಿಲ್ 12ರಂದು ಬೆಳಿಗ್ಗೆ 8-30ಕ್ಕೆ ನಗರದ ರಾಮಮಂದಿರ ಕಡೆಯಿಂದ ನಾಗನಹಳ್ಳಿ ರಿಂಗ್ ರಸ್ತೆ ಕಡೆಗೆ ‘ಕುರಿಗಳಿಗೆ ಮರದ ತಪ್ಪಲು ಕೊಯ್ಯಲು ಬಳಸುವ ಕುಡುಗೋಲ’ ತನ್ನ ಸೈಕಲ್ಗೆ ಕಟ್ಟಿಕೊಂಡು ಮೊಹ್ಮದ್ ಮೆಹಬೂಬ್ ತೆರಳುತ್ತಿದ್ದ, ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘಾ ಆತನ ಸೈಕಲ್ ಹಿಂದೆ ಬೈಕ್ ಮೇಲೆ ಬರುತ್ತಿದ್ದಳು. ತಿರುವೊಂದರಲ್ಲಿ ಸೈಕಲ್ ನ್ನು ಎಡಕ್ಕೆ ತಿರುಗಿಸಿದಾಗ ಹಿಂದೆ ಸಿಕ್ಕಿಸಿದ್ದ ಕುಡುಗೋಲು ಬಲಕ್ಕೆ ಹೊರಳಿ ಬೈಕ್ ಮೇಲೆ ಬರುತ್ತಿದ್ದ ಮೇಘಾ ಕತ್ತನ್ನು ಕತ್ತರಿಸಿತ್ತು. ತೀವ್ರ ರಕ್ತಸ್ರಾವದಿಂದ ಮೇಘಾ ಸಾವನ್ನಪ್ಪಿದ್ದಳು. ಕರುಣೇಶ್ವರ ಬಡಾವಣೆಯ ನಿವಾಸಿಯಾಗಿದ್ದ ಮೇಘಾ (20) ನಗರದ ಪಿಡಿಎ ಕಾಲೇಜಿನಲ್ಲಿ ಮೋದಲನೆ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದಳು. ವಿದ್ಯಾರ್ಥಿನಿಯ ಸಾವು ಜನರನ್ನು ನಿಬ್ಬೆರಗಾಗಿಸಿತ್ತು.
ಈ ಕುರಿತು ಸಂಚಾರಿ ಪೋಲಿಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ಮಹಾದೇವ್ ಪಂಚಮುಖಿ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದರು. ಕುಲಂಕುಶವಾಗಿ ವಿಚಾರಣೆ ಕೈಗೊಂಡ ನ್ಯಾಯಾದೀಶರು ಮೊಹ್ಮದ್ ಮೆಹಬೂಬ್ಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಆಪಾಧಿತ ಬರಿಸುವ ದಂಡದನ್ನು ಮೃತಳ ತಾಯಿಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ್ ತೇಲಿ ಅವರು ವಾದ ಮಂಡಿಸಿದರು.
